Friday, July 6, 2007

ಮಳೆ-ನೆನೆಯುವ ಖುಷಿ

ಕಡಲೂರಿನಲ್ಲಿ ಅದ್ಭುತ ಮಳೆ.ಗುಡುಗಿನ ತಬಲಕ್ಕೆ ಸಿಡಿಲಿನ ನರ್ತನ ಗಾಳಿಯ ಹಿಮ್ಮೇಳದಲ್ಲಿ ಮಳೆಯ ಹಾಡು.

ನೀವು ಮಳೆಲಿ ನೆಂದಿದೀರಾ? ಅಯ್ಯೋ ಯಾರು ನೆಂದಿರೋಲ್ಲ ಎಲ್ಲ ನೆಂದಿರ್‌ತಾರೆ ಅನ್ನಬೇಡಿ.. ಒಂದೇ ಸಮನೆ ಸುರಿಯೋ ಮಳೆಲಿ, ಒಂದು ಅರ್ಧ ಗಂಟೆ ಬೇರೇನು ಮಾಡದೇ, ಕುಣಿದೆ, ಕಿರುಚದೆ ಸುಮ್ಮನೇ ಮಳೆ ಸದ್ದು ಕೇಳುತ್ತಾ ನೆಂದಿದೀರಾ? ಇಲ್ಲ ಅನ್ನೋದಾದರೆ ಈ ಮಳೆಗಾಲದಲ್ಲಿ ಚಾನ್ಸ್ ಬಿಡಬೇಡಿ. ಮಳೆ ಸುರಿಯೊಕ್ಕೆ ಶುರುವಾಯಿತ? ಮನೆಯಿಂದ, ರೂಮಿನಿಂದ, ಆಫೀಸಿನಿಂದ ಹೊರಗೆ ಬನ್ನಿ. ಆಕಾಶದಿಂದ ಮುತ್ತಾಗಿ ಬೀಳುತ್ತಿರುವ ಮಳೆಗೆ ಮೈ ಒಡ್ಡಿ ಖುಶಿ ಆಗ್ತಿದೆ ಅಲ್ಲವ? ಉಹೂo ಕಿರುಚಲೇಬಾರದು. ಮೋಡ ಮೌನ ಒಡೆದಿರುವಾಗ ನಿಮ್ಮ ಮಾತಿಗೆ ಬೆಲೆ ಇಲ್ಲ. ಸುಮ್ಮನೇ ಕೇಳಿ,ಸುರಿವ ಧಾರೆಯ ಶಬ್ಧವನ್ನ ಗಾಳಿಯ ಪಿಸುಮಾತನ್ನ.. ಛಳಿ ಆಗ್ತಿದೆಯಾ?? ಪರವಾಗಿಲ್ಲ ರೀ, ಮನಸ್ಸು ಬೆಚ್ಚಾಗಾಗುತ್ತಿದೆಯಲ್ಲ.. ಹೊಟ್ಟೆಯೋಳಗಿನಿಂದ ಇಷ್ಟಿಷ್ಟೇ ಚಿಮ್ಮುತ್ತಿರುವ ನಡುಕ ಎರಡೇ ನಿಮಿಷಕ್ಕೆ ಹತೋಟಿಗೆ ಬರುತ್ತದೆ. ಹೀಗೆ ಇಂಚಿಂಚಾಗಿ ವ್ಯಾಪಿಸುವ ನಡುಕ ನಿಮಗೆ ಮಳೆಯ ಹುಚ್ಚು ಹಿಡಿಸದಿದ್ದರೆ ಕೇಳಿ...

ಈ ಕನ್ನಡ, ಹಿಂದಿ ಚಲನಚಿತ್ರಗಳ ಬಗ್ಗೆ ನನ್ನದೊಂದು complaint ಇದೆ ಯಾವುದಾದರೂ ಭುತಾನೋ, ದೆವ್ವಾನೋ, ಕರಾಳ ರಾತ್ರಿಯ ಮಾಂತ್ರಿಕನನ್ನೋ, ಇಲ್ಲ ಯಾವುದಾದರೂ ಅಪಘಾತವಾನ್ನೋ ತೋರಿಸುವಾಗ ಕಂಪಲ್ಸರಿ ಮಳೆ ಬರ್ತಿರಬೇಕು. ಮಳೆ ಇಲ್ಲದಿದ್ದರೆ ಅಪಘಾತವೇ ಆಗೋಲ್ಲ, ಭೂತ ದೆವ್ವ ಬರೋಲ್ಲ ಅನ್ನೋ ಹಾಗೆ. ಇಂಥದನ್ನ ನೋಡಿದರೆ ಜನ ಮಳೆನ ಹೇಗೆ ಪ್ರೀತಿಸುತ್ತಾರೆ? ಮಳೆ ಅಂದ ತಕ್ಷಣ ಹೆದರಿಕೊಂಡು ಹೊದ್ದುಕೊಂಡು ಮಲಗುತ್ತಾರೆ ಅಷ್ಟೇ.

ಈ ಬಯಲುಸೀಮೆಯವರಿಗೆ ಮಳೆ ಅಂದರೆ ವಿಚಿತ್ರ ಭಯ. ಒಂದು ದಿನ ನಾನು ನನ್ನ ಸ್ನೇಹಿತೆಯರು(ಎಲ್ಲ ಬಯಲುಸೀಮೆಯವರು) ಅವರ ಉರಿನಲ್ಲಿ ಯಾವುದೋ ಚಂದದ ಕೆರೆ ಇದೆ ಅಂತ ಅದನ್ನ ನೋಡೋಕ್ಕೆ ಹೊರಟೆವು ಹತ್ತು ಹದಿನೈದು ನಿಮಿಷ ನೆಡೆದಮೇಲೆ 'ಕಾಡು-ಕಾಡು' ಅಂತ ಕೂಗೊಕ್ಕೆ ಶುರು ಮಾಡಿದರು. ನನಗೆ ದೂರದವರೆಗೂ ಕಾಡು ಕಾಣಿಸುತ್ತಿರಲಿಲ್ಲ ಇವರು ನೋಡಿದರೆ ಕಾಡು ಕಾಡು ಅಂತ ಕುಣೀತಿದಾರೆ.. "ಎಲ್ರೆ ಕಾಡು?" ಅಂದ್ರೆ ನೋಡು ಅಂತ ಒಂದಷ್ಟು ಪೊದೆ, ಹತ್ತು ಹದಿನೈದು ಮರ ಬೆಳೆದಿರುವ ಕಡೆ ಬೊಟ್ಟು ಮಾಡುತ್ತಿದ್ದರು.ಇವರನ್ನು ನೋಡಿ ನಗಬೇಕೋ ಅಳಬೆಕೋ ಗೊತ್ತಾಗಲಿಲ್ಲ ನನಗೆ.
ಹಾ ಎಲ್ಲಿಗೋ ಬಂದುಬಿಟ್ಟೆ ಸರಿ ಅಲ್ಲೇ ಪಕ್ಕದಲ್ಲಿದ್ದ ಕೆರೆ ಕಡೆ ಹೋಗುತ್ತಿದ್ದೇವೆ, ದಪ್ಪ ದಪ್ಪ ಹನಿಗಳು ಆಕಾಶದಿಂದ ಉದುರಲು ಶುರು. ಈ ಹುಡುಗೀರೆಲ್ಲ "ಅಯ್ಯೋ ಮಳೆ! ಬೇಗ ಬಾರೆ" ಅಂದುಕೊಂಡು ರೈಟ್ ಅಬೌಟ್ ಟರ್ನ್ ಅಂತ ಮನೆ ಕಡೆ ಒಂದೇ ಸಮ ಓಡಿದರು. ನನಗೆ ಕಕ್ಕಾಬಿಕ್ಕಿ. ನಾನು ಆರಾಮಾಗಿ ಮಳೆಲಿ ನೆಂದುಕೊಂಡು ನಾವೆಲ್ಲ ಉಳಿದುಕೊಂಡಿದ್ದ ನನ್ನ ಸ್ನೇಹಿತೆಯ ಮನೆ ಸೇರಿದೆ.
"ಯಾಕ್ರೆ ಹಂಗೆ ಓಡಿ ಬಂದ್ರಿ" ಅಂದ್ರೆ

"ಅಯ್ಯೋ ಮಳೆ ಬರೊಕ್ಕೆ ಶುರುವಾಯಿತು ಭಯ ಆಗೋಲ್ವಾ?" ಅಂದಳು ಶಿಲ್ಪ.

ಭಯ ಯಾಕೆ ಅಂದ್ರೆ, ಮಳೆ ಬಂದಾಗ ಕರ್ನಾಟಕದಲ್ಲಿ ಸತ್ತವರ ಕಥೆಗಳನ್ನೆಲ್ಲಾ ಬಿಡದೆ ಕೊರೆದಳು 'ಅತಿವೃಷ್ಟಿಯಿಂದ ಉಂಟಾಗುವ ಹಾನಿಗಳು' ಅಂತ ನಾನು ಪ್ರಭoದ ಬರೀಬಹುದೇನೋ ಅಷ್ಟು ಮಳೆಯಿಂದ ಆಗುವ ಹಾನಿಗಳ ಬಗ್ಗೆ ಇನ್ನೊಬ್ಬಳು ಹೇಳಿದಳು. ನಾನು "ಅದೆಲ್ಲ ಸರಿ ನಿಮ್ಮೂರಲ್ಲಿ ಮಳೆ ಬರೋದೆ ಅಪರೂಪ. ಅದು ಏನು ತುಂಬಾ ಜೋರಾಗಿ ಬರುತ್ತಿರಲಿಲ್ಲ ನಾನು ನೆಂದುಕೊಂಡು ಬಂದೆನಲ್ಲ ಏನಾಯ್ತು?" ಅಂದ್ರೆ ನೀನು ಬಿಡು ಅಂದಳು. ನೀನೊಂದು ಮೆಂಟ್ಲೂ ನಿಂಗೆನು ಹೇಳಿದ್ರು ಪ್ರಯೋಜನ ಇಲ್ಲ ಅನ್ನೋ ಅರ್ಥ.

ಸರಿ ಅದು ಬಿಡಿ ಎಲ್ಲಿದ್ಡೀವಿ? ಮಳೆಲಿ ನೆನಿತಾ ಇದ್ದೀವಿ. ತೃಪ್ತಿಯಾಗಿ ನೆಂದಾಯಿತ? ವಾಪಸ್ಸು ರೂಮಿಗೆ, ಮನೆಗೆ, ಬನ್ನಿ. ನೀವು ಆಫೀಸಿನಲ್ಲಿದ್ರೆ ದಯವಿಟ್ಟು ರಜ ಹಾಕಿ ಮನೆಗೆ ಹೋಗಿ. ಬೆಚ್ಚಗಿನ ಬಟ್ಟೆ ಹಾಕಿಕೊಳ್ಳಿ ನಂತರ ಒಂದು ಅತ್ಯದ್‍ಭುತವಾದ ಕಾಫಿ ಮಾಡಿಕೊಂಡು ಒಂದು ದೊಡ್ಡ ಬಟ್ಟಲಿಗೆ ಅದನ್ನ ಸುರಿದುಕೊಂಡು ಅದರ ಹಿತವಾದ ಬಿಸಿ ಮೈ ಮನಗಳನ್ನು ವ್ಯಾಪಿಸುವಂತೆ ತೊಟ್ಟು ತೊಟ್ಟಾಗಿ ಹೀರುತ್ತಿದ್ದರೆ ಅದೇನೋ ಹೇಳುತ್ತಾರಲ್ಲ.... ಸ್ವರ್ಗಕ್ಕೆ ಮೂರೇ ಗೇಣು.