Wednesday, August 29, 2007

ಮಳೆ-ನೆನಪು

ನಾನು ಸುಶ್ ನಮ್ಮ ಹಾಸ್ಟಲೆಂಬ ಜೈಲಿನಲ್ಲಿ ನನ್ನ ರೂಮಿನ ಮುಂದಿನ ಕಿಟಕಿಯ ಬಳಿ ಬುಕ್ಕು ಪೆನ್ನು ಹಿಡಿದುಕೊಂಡು ಕುಳಿತಿದ್ದೆವು. ಮನೆಯಂಗಳದಲ್ಲೊಂದು ಸಾಹಿತ್ಯ ಸಂಜೆ ಎಂಬ ಕಾರ್ಯಕ್ರಮದ ರಿಪೋರ್ಟು ಮಾಡೊಕ್ಕಿತ್ತು.. ಜರ್ನಲಿಸಮ್ ಮೇಡಂ ಅಸೈನ್ಮೆಂಟ್ ಕೊಟ್ಟಿದ್ದರು. ಸುಶ್ ಬರೆಯೋಕ್ಕೆ ಶುರು ಮಾಡಿದ್ದಳು ನಾನು ಕಿಟಕಿಯಂದ ಕಾಣುವ ನಮ್ಮ ಕಾಲೇಜನ್ನೇ ನೋಡುತ್ತಾ ಕುಳಿತ್ತಿದ್ದೆ. ಸುಶ್ ಮಳೆ ಅಂದ್ರೆ ಏನನ್ನಿಸುತ್ತೆ ನಿಂಗೆ ಅಂತ ಕೇಳ್ದೆ ಅವಳು ಸುಮ್ನೆ ನನ್ನ ದುರುಗುಟ್ಟಿಕೊಂಡು ನೋಡಿ ಮತ್ತೆ ಬರೆಯೊದನ್ನ ಮುಂದುವರೆಸಿದಳು."ಇವಳಿಗೊಂದು ಮಳೆ ಹುಚ್ಚು" ಅಂತ ಗೊಣಗಿದ್ದು ಕೇಳಿಸಿತು.


ಕಡಲೂರಿನ ಮಳೆ ವಿಚಿತ್ರ .ನಮ್ಮೂರಲ್ಲಿ ಚಂದ, ಮಳೆ ಬರೋಕ್ಕೆ ಶುರುವಾದರೆ ಪೂರ್ತಿ ನಿಂತಿತು ಅಂತ ಹೇಳೋಕ್ಕಾಗಲ್ಲ ಸಣ್ಣಗೆ ಉದುರುತ್ತಾನೇ ಇರುತ್ತೆ.ಇಲ್ಲಿ ವಿಚಿತ್ರ ಸೂಚನೆಯನ್ನೇ ಕೊಡದೆ ದಬ ದಬ ಅಂತ ಸುರಿದು ಮತ್ತೆ ನಿಂತೇ ಹೋಗುತ್ತೆ ಅದರ ಘಮವನ್ನೂ ಉಳಿಸದೆ.

ನಮ್ಮೂರ ಮಳೆ ಅಮ್ಮ ಮಾಡೋ ಕಾಫಿ ಥರ; ಬೆಳಗ್ಗೆ ಆರು ಮೂವತ್ತಕ್ಕೆ ಸ್ವಲ್ಪವೇ ಸ್ವಲ್ಪ ಒಂದು ಅರ್ಧ ಹಿಡಿಯಷ್ಟು ಕಾಫಿ ಬೀಜವನ್ನು ಹುರಿದು, ಅದನ್ನ ಪುಡಿ ಮಾಡುವ ಬಿಳೀ ಮಿಷಿನ್ನಿಗೆ ಹಾಕಿ ಟರ್ರ್ ಅನ್ನಿಸುತ್ತಿರುವಾಗಲೇ ಮನೆಯೆಲ್ಲಾ ಹಿತವಾಗಿ ಹರಡಿದ ಕಾಫಿಯ ಘಮ ಅದನ್ನ ಕುದಿಯೋ ಸಕ್ಕರೆ ನೀರಿಗೆ ಹಾಕಿ, ಸೋಸಿ, ಆಗಷ್ಟೇ ಹಾಲಿನವನು ತಂದ ಹಾಲನ್ನು ಕಾಯಿಸಿ ಅದನ್ನ ಡಿಕಾಕ್ಷನ್ನಿಗೆ ಸೇರಿಸಿ ಕುಡಿಯಲು ಕೊಟ್ಟ ಹಾಗೆ.. ಮಳೆ ಬರುವ ಮುಂಚೆಯೂ ಬಂದ ಮೇಲೂ ಹಿತವಾಗಿ ಹರಡಿದ ಮಳೆಯ ವಾತಾವರಣ, ಥೇಟ್ ಅಮ್ಮನ ಕಾಫಿಯೇ ಕುಡಿಯೋ ಮುಂಚೆಯೂ ಕುಡಿದ ಮೇಲೂ ಹಿತವೆನಿಸುವ ಅದರ ರುಚಿಯಂತೆ.


ಈ ಯೋಚನಾ ಲಹರಿಯನ್ನು ತುಂಡರಿಸಿದ್ದು ಸೂಚನೆಯನ್ನೇ ಕೊಡದೆ ಸುರಿಯಲು ಶುರುವಾದ ಮಳೆ ಸುಶ್ ನನ್ನ ನೊಡಿ ಮುಗುಳ್ನಕ್ಕಳು. ನಮ್ಮ ಕಾಲೇಜು ಮಳೆಯಲ್ಲಿ ನೆನೆಯುತ್ತಿತ್ತು.ತಂಗಾಳಿಯ ಜೊತೆ ಚುರುಚೂರೇ ಕಿಟಕಿಯೊಳಕ್ಕೆ ನುಗ್ಗುತ್ತಿರುವ ಮಳೆಯ ಹನಿಗಳು ಹಿತವಾಗಿ ನಮ್ಮಿಬ್ಬರನ್ನೂ ಒದ್ದೆಯಾಗಿಸುತ್ತಿತ್ತು.. ಸುಶ್ ಪುಸ್ತಕ ಮುಚ್ಚಿಟ್ಟು ಏನೋ ಯೊಚಿಸತೊಡಗಿದಳು...


ಮಳೆ ಅಂದ್ರೆ ನೆನಪು. ಮಳೆ ನೆಲವನ್ನು ಅಪ್ಪಿ ಚಿಮ್ಮುತ್ತಿದ್ದರೆ, ನನ್ನೊಳಗಿನ ನೆನಪಿನ ಪುಟಗಳು ಒಂದೊಂದಾಗಿ ಬಿಚ್ಚಿಕೊಳ್ಳಲು ಶುರು. ತಾತನ ಮನೆ ನೆನಪು, ಮಳೆ ಬೀಳುತ್ತಿದ್ದಂತೆಯೇ ಉರಿನಲ್ಲಿ ಮನೆ ಮುಂದೆ ಹರಡಿರುವ ಅಡಕೆಯನ್ನೆಲ್ಲಾ ಆ ದೊಡ್ಡ ದೊಡ್ಡ ಗೋಣಿ ಚೇಲದ ಸಮೇತ ಒಳಗೆ ತೆಗದುಕೊಂಡು ಹೋಗುವ ಚಿಕ್ಕಮ್ಮ, ಸರ ಸರನೆ ಓಡಿ ಬಂದು ಅವಳ ಜೊತೆ ಕೈ ಜೊಡಿಸುವ ಚಿಕ್ಕಪ್ಪ, ಆಗಿನ ಗಡಿಬಿಡಿ, 'ಹಾಳು ಮಳೆ' ಎಂದು ಸುಮ್ಮನೆ ಬಯ್ಯುವ ಪಾಟಿ(ಅಜ್ಜಿ), ಮಳೆಯಲ್ಲಿ ಒದ್ದೆಯಾಗುತ್ತಿರುವ ತನ್ನ ಹದಿನಾರು ಮೊಳದ ಸೀರೆಯನ್ನು ತೆಗೆಯಲು ಬರುತ್ತಿರುವ ಎದುರು ಮನೆಯ ಶೇಶಮ್ ಪಾಟಿ, ಮಳೆ ಶುರುವಾಗುತ್ತಿದ್ದಂತೆಯೇ ಕಾಫಿಗೆ ಹವಣಿಸುವ ಅಜ್ಜ,ಇವನ್ನೆಲ್ಲಾ ಪ್ರತೀ ವರ್ಷವೂ ಹೊಸದು ಎನ್ನುವಂತೆ ನೋಡುವ ನಾವು.....

ಏನೋ ಯೋಚಿಸುತ್ತಿದ್ದವಳು, ಹ್ಮ್ ಮ್ ಮ್.. ಎಂದು ನಿಟ್ಟುಸಿರು ಬಿಡುತ್ತಾ "ಮಳೆ ಅಂದ್ರೆ ನೆನಪು." ಅಂದಳು ಸುಶ್. ನಾನು ಸುಮ್ಮನೆ ನಕ್ಕೆ....

Tuesday, August 21, 2007

ಅಮ್ಮಾ.. ನಿನ್ನ ಎದೆಯಾಳದಲ್ಲಿ..

ಉಹೂಂ, ಅಪ್ಪನ ಮುಖ ನೆನಪಿಲ್ಲ ನನಗೆ ನನಗೆ ನೆನಪಿರೋದೆಲ್ಲ ಬರೀ ಇಷ್ಟೆ ಅಮ್ಮ ಕೆಂಪು ಸೀರೆ ಉಟ್ಟುಕೊಂಡು ಒಂದು ಶವದ ಮುಂದೆ ಕೂತಿರೋದು (ಅದು ಶವ ಅಂತಾನೂ ಗೊತ್ತಿರಲಿಲ್ಲ ನಂಗೆ ಯಾರೋ ಮಲಗಿದಾರಲ್ಲ .. ಯಾಕೆ ಬೀದೀಲಿ ಮಲಗಿದಾರೆ ಅನ್ಕೊಂಡಿದ್ದೆ) ಮತ್ತೆ ಶೂನ್ಯವನ್ನು ದ್ರುಷ್ಟಿಸುವ ಅಮ್ಮನ ಕಣ್ಣುಗಳು. ಎಲ್ಲರೂ ಅಳುತ್ತಿದ್ದರು, ಅಮ್ಮನ ಕಣ್ಣು ಭಯವಾಗೊಷ್ಟು ಕೆಂಪಾಗಿತ್ತು. ಪ್ರಾಯಷಃ ರಾತ್ರಿಯೆಲ್ಲಾ ಅತ್ತಿರಬೇಕು. ಏನಾಗಿದೆ ಅಂತ ಗೊತ್ತಿರಲಿಲ್ಲ ನನಗೆ ಆದರೆ ಅಮ್ಮನಲ್ಲಿ ಆದ ಬದಲಾವಣೆ ನನಗೆ ಅಳು ತರಿಸಿತ್ತು.ಅಮ್ಮನ ಹತ್ತಿರ ಹೋಗೋಕ್ಕೆ ಬಿಟ್ಟಿರಲಿಲ್ಲ ನಮ್ಮನ್ನ
"ಈ ಮೂರು ವರ್ಷದ ಮಗೀಗೆ ನಿನ್ ಅಪ್ಪಜಿ ಸತ್ತ್ ಹೋಗೈತೆ ಅಂತ ಹೇಗ್ ಹೇಳಾದು?"
ಅಂತ ಅಜ್ಜಿ ದೊಡ್ಡ್ ದನಿ ಮಾಡಿ ಅಳೋಕ್ಕೆ ಶುರು ಮಾಡಿದ್ಲು ನನಗೆ ಭಯ ಆಗಿ ನಾನು ಮನೆಯಾಳು ಮಂಜನ ಹತ್ರ ಓಡೋಗಿದ್ದೆ
ಹ್ಮ್ಮ್ಮ್ಮ್ ಮ್ ಮ್... ಅಂತ ದೊಡ್ಡ ನಿಟ್ಟುಸಿರುಬಿಟ್ಟು ನಾನ್ಯಾವಾಗಲೂ ಇಷ್ಟೇ ನೆನಪುಗಳಲ್ಲೇ ಮುಳುಗಿ ಹೋಗಿರ್ತೀನಿ ಅವರು ಬರೋಷ್ಟೊತ್ತಿಗೆ ಬೀಟ್ರೂಟ್ ಪಲ್ಯ ಮಾಡಿಟ್ಟಿರಬೇಕು.ಇರೋ ಮೂರು ಜನಕ್ಕೆ ಎರಡು ಕೇಜಿ ಬೀಟ್ರೂಟ್ ತಂದಿಟ್ಟಿದಾರೆ ಬರೀ ಅದರದೇ ಪಲ್ಯ, ಸಾಂಬಾರು, ಗೊಜ್ಜು ಅಂತ ದಿನಾ ಮಾಡಿ ಹಾಕಬೇಕು. ಆವಾಗ ಬುದ್ದಿ ಬರುತ್ತೆ ಅಂದುಕೊಂಡು, ಅಡುಗೆ ಮನೆ ಕಡೆ ನೆಡೆದಳು.

ವಾಣಿ ಗ್ರುಹಿಣಿ ಮ್ ಸ್ ಸಿ ಮಡಿದಾಳೆ ಗಂಡ ಆರ್ ಬಿ ಐ ನಲ್ಲಿ ಮ್ಯಾನೇಜರ್. ದೊಡ್ಡ ಬ್ಯಾಂಕು, ದೊಡ್ಡ ಕೆಲಸ, ದೊಡ್ಡ ಸಂಬಳ. ಇವರಿಗೆ ಒಬ್ಬನೇ ಮಗ ರಾಘು. ವಾಣಿಗೆ ಅಮ್ಮ ತನ್ನ ಜೊತೇಲಿ ಇರಲಿ ಅನ್ನೋ ಆಸೆ ಆದರೆ ಅವಳ ಅಮ್ಮ ಮಾತ್ರ ತನ್ನ ಹಳ್ಳಿ ಮನೆಯೇ ಸ್ವರ್ಗವೆಂದುಕೊಂಡಾಕೆ. ಬೇಜಾರಾದಾಗ ವಾಣಿ ಮನೇಲಿ ಸ್ವಲ್ಪ ದಿನ ಇನ್ನೊಂದು ಸ್ವಲ್ಪ ದಿನ ವಾಣಿ ಅಕ್ಕ ವೀಣನ ಮನೇಲಿರ್ತಾರೆ.


ವಸುದಕ್ಕನ ಮದುವೆ ದಿನದ ಚಿತ್ರ ಇನ್ನೂ ಕಣ್ಣಲ್ಲಿ ಕಟ್ಟಿದಂತಿದೆ ಅವಳ ಅಮ್ಮ ಸತ್ತ ಮೇಲಲ್ಲವೆ ನಮ್ಮಮ್ಮ ಎರಡನೇ ಹೆಂಡತಿಯಾಗಿ ಆ ಮನೆ ಸೇರಿದ್ದು. ಅವಳೂ 'ಅಮ್ಮ' ಎಂದೇ ಕರೆಯುತ್ತಿದ್ದಳು ಆದರೆ ಅತ್ತೆ ,ಅಜ್ಜಿ, ಎಲ್ಲರೂ ಸೇರಿಕೊಂಡು ಅವಳ ಮದುವೆಯ ಯಾವ ಕೆಲಸಕ್ಕೂ ಕರೆಯದೆ ದೂರ ಇಟ್ಟಿದ್ದರು. ಮದುವೆಗೆ ಕರೆಯುವ ಯೋಚನೆಯನ್ನೂ ಮಾಡಿರಲಿಲ್ಲ ಅವರು ಅವಳ ಮದುವೆಯ ಓಲಗದ ಸದ್ದು ಬಸ್ಸ್ಟಾಂಡಿನಲ್ಲಿ ಮಂಗಳಜ್ಜಿ ಮನೆಗೆ ಹೋಗಲು ಬಸ್ಸಿಗೆ ಕಾಯುತ್ತ ಕುಳಿತಿದ್ದ ನಮಗೆ ಕೇಳಿಸುತ್ತಿತ್ತು. ನಾನು ಜೋರಾಗಿ ಅಳುತ್ತಿದ್ದೆ, ನನಗಿಂತ ಎರಡೇ ವರ್ಷಕ್ಕೆ ದೊಡ್ಡವಳಾದ ವೀಣ ವಯಸ್ಸಿಗೆ ಮೀರಿದ ಅರಿವನ್ನು ಮುಖದಲ್ಲಿ ಹೊತ್ತು ಮೌನವಾಗಿ ಕುಳಿತಿದ್ದಳು.ಅಮ್ಮನ ಕಣ್ಣು ಮತ್ತದೇ ಶೂನ್ಯದೆಡೆಗೆ...


ಗಂಗಜ್ಜಿ ಹೆಸರೇ ಒಂದು ನಡುಕ ಇಡೀ ಊರಿಗೆ ಊರೇ ಹೆದರುತ್ತಿತ್ತು ಈ ಹೆಸರಿಗೆ. ಗಂಗಜ್ಜಿಯಂತಹ ಅತ್ತೆ ಸಿಗುತ್ತಳೆ ಅಂತ ಗೊತ್ತಿದ್ದರೂ ಮಂಗಳಜ್ಜಿ ತನ್ನ ಪ್ರೀತಿಯ ಕೊನೇ ಮಗಳನ್ನು ಹೇಗೆ ಅವರ ಮನೆಗೆ ಕೊಟ್ಟರು ಅದೂ ಎರಡನೇ ಸಂಭಂದಕ್ಕೆ? ಶ್ರೀಮಂತರ ಮನೆ ಅಂತಲ? ಸೆರೆಮನೆ ಆದರೂ ಪರವಾಗಿಲ್ಲ ಬಂಗಾರದ್ದಲ್ಲವ ಅನ್ನೋ ಸ್ವಭಾವವ?
ನಿಮ್ಮ ಅಪ್ಪ ಎಂದರೆ ಗಂಡು ಗಂಡು ದೊಡ್ಡಪ್ಪ ಯಾವುದ್ದಕ್ಕೂ ಲಾಯಕ್ಕಿಲ್ಲ ಅನ್ನುತ್ತಿದ್ದರು ಊರಿನವರು ಯಾವುದೇ ಇತಿಮಿತಿ ಇಲ್ಲದೆ ಖರ್ಚು ಮಾಡುತ್ತಿದ್ದರಂತೆ ಅಪ್ಪ. ಗಂಗಜ್ಜಿಯಂತಹ ಗಂಗಜ್ಜಿ ಅಪ್ಪನಿಗೆ ಹೆದರುತ್ತ್ಹಿದ್ದಳಂತೆ.ತನಗೆ ಕಿಂಚಿತ್ತೂ ಹೆದರದ ಬಿಟ್ಟರೆ ತನ್ನನ್ನೇ ಹುರಿದು ತಿನ್ನುವಂತ ತನ್ನ ಮಗನ ಮೇಲೆ ಗಂಗಜ್ಜಿಗೆ ಅಸಾದ್ಯ ಸಿಟ್ಟು.
ಅವಳೇ ಅಪ್ಪನ ಮೊದಲನೇ ಹೆಂಡತಿಯನ್ನು ಸಾಯಿಸಿದ್ದು, ಆಮೇಲೆ ಅಪ್ಪನನ್ನೂ ಕೊಂದಳು. ನಾನು ಹುಟ್ಟಿದಾಗ ತಂದೆಗೆ ಆಗದ ನಕ್ಷತ್ರದಲ್ಲಿ ಹುಟ್ಟಿದಾಳೆ ಸಾಯಿಸಿಬಿಡಿ ಎಂದು ನನ್ನ ಕೊಲ್ಲಲು ಮಂಗಳಜ್ಜಿಯ ಮನೆಯವರೆಗೂ ಬಂದಿದ್ದಳಂತೆ. ಅಕ್ಕನ ಬಾಯಿಗೆ ಭಾರದ ಕಬ್ಬಿಣ ಹಾಕಿ ಅವಳು ಸಾಯುವ ಸ್ಥಿತಿ ತಲುಪಿ ಒದ್ದಾಡುತ್ತಿದ್ದರೂ ಸುಮ್ಮನೇ ಯಾವುದೇ ಭಾವನೆಗಳಿಲ್ಲದೆ ನೋಡುತ್ತಿದ್ದ ಅಜ್ಜಿಯನ್ನು ಕಂಡು ಮಂಜ ದಂಗಾಗಿದ್ದನಂತೆ, ಅವನು ಅ ದಿನ ಅಲ್ಲಿಲ್ಲದಿದ್ದರೆ ಅಕ್ಕ ಎಂದು ಕರೆಯಲೂ ಯಾರಿರುತ್ತಿರಲಿಲ್ಲ. ಅಜ್ಜಿಗೆ ಕೊಲೆ ಮಾಡುವುದು ಒಂದು fancy ಆಗಿಬಿಟ್ಟಿತ್ತಾ?



"ನಿಮ್ಮಪ್ಪ ರಾಜಪ್ಪ ಹೆಸರಿಗೆ ತಕ್ಕ ಹಾಗೆ ರಾಜನಂತೆ ಇರುತ್ತಿದ್ದ. ಬಿಳೀ ಪಂಚೆ, ಬಿಳೀ ಶರಟು, ಕೈಯಲ್ಲಿ ಪುಸ್ತಕ ಮತ್ತು ಪಂಚೆಯ ಗಂಟಿಗೆ ಸಿಗಿಸಿದ ಮಚ್ಚು ಅವನು ತೋಟದ ಕಡೆಗೆ ಹೊರಟ ಅಂದರೆ ಆಳುಗಳೆಲ್ಲಾ ಚುರುಕಾಗಿ ಕೆಲಸ ಮಾಡಲು ಶುರು ಮಾಡುತ್ತಿದ್ದರು. ಅವ್ನ ಗತ್ತೇ ಗತ್ತು"
ಎಂದು ಹೇಳುತ್ತಿದ್ದ ಪಕ್ಕದ ಮನೆ ಪದ್ಮಜ್ಜಿಯ ಮಾತುಗಳಿಂದ ಅಪ್ಪ ಹೇಗಿದ್ದಿರಬಹುದು ಎಂದು ತುಂಬ ಸಾರಿ ಕಲ್ಪಿಸಿಕೊಂಡಿದ್ದೇನೆ... ಅಪ್ಪ ಇರಬೇಕಿತ್ತು.....



ಆಸ್ತಿ ಭಾಗ ಮಾಡೋವಾಗ ಮಾವ ಸಹಾಯಕ್ಕೆ ಬಂದ್ದಿದ್ದ ಅನ್ನೋದೆನೋ ನಿಜ, ಆದರೆ ಆಮೇಲೆ ಅವನೂ ಅತ್ತೆಯೂ ಸೇರಿಕೊಂಡು ಗುಕ್ಕುಗುಕ್ಕಾಗಿ ನಮ್ಮ ಆಸ್ತಿಯನ್ನು ತಿನ್ನುತ್ತಿದ್ದುದು ಗೊತ್ತಾಗುತ್ತಿದ್ದರೂ, ಅಮ್ಮ ಏಕೆ ಸುಮ್ಮನಿದ್ದಳು ?ಗೊತ್ತಾಗುವುದಿಲ್ಲ."ಗಂಡು ದಿಕ್ಕಿಲ್ಲದ ಮನೆ ಅವನಾದರೂ ಒತ್ತಾಸೆಗೆ ಇರಲಿ ಅಂತ ಸುಮ್ಮನಿದ್ದೆ" ಅಂದಿದ್ದಳು ಬೇರೆ ಯಾವ ಕಾರಣವೂ ಹೊಳೆಯದೆ ನಿಜವಾದ ವಿಶಯವೆಂದರೆ ತನ್ನ ಅಣ್ಣನೆಂದರೆ ಸುಮ್ಮನೆ ಪ್ರೀತಿ ಅವಳಿಗೆ.ಅಣ್ಣನಿಗೆ ಏನೂ ಗೊತ್ತಗಲ್ಲ ಅತ್ತಿಗೆ ಹೇಳಿದಂಗೆ ಕುಣಿತಾನೆ ಪಾಪ ಅನ್ನೊ ನಂಬಿಕೆ ಅವಳದ್ದು ಆದರೆ ಮಾವ ಎಂಥವನೆಂದು ನನಗೆ ಗೊತ್ತಾಗುತ್ತಿತ್ತು ನಾನು ಇವತ್ತಿಗೂ ಮಾವನನ್ನು ಮಾತಾಡಿಸುತ್ತಿಲ್ಲ....



ಅಪ್ಪನ ಜೊತೆಯ ಐದು ವರ್ಷದ ದಾಂಪತ್ಯ ಜೀವನದಲ್ಲಿ ನೀನು ಸುಖವಾಗಿದ್ದೆಯ ಎಂದು ಕೇಳಿದರೆ ಅಮ್ಮ ಇಂದಿಗೂ ಉತ್ತರಿಸುವುದಿಲ್ಲ ಉತ್ತರ ಕೊಡದೇ ಇರುವುದೂ ಒಂದು ಉತ್ತರವೇ.. ಆದರೆ ನನಗೂ ಅಮ್ಮನ ಉತ್ತರ ಬೇಕಿಲ್ಲ.. ಈ ಪ್ರಶ್ನೆ ಕೇಳಿದ ನಂತರ ಮೌನವಾಗುವ ಅಮ್ಮ, ಇಪ್ಪತ್ತು ಇಪ್ಪತ್ತೆರೆಡು ವರ್ಷ ಹಿಂದಕ್ಕೆ ಹೋಗುವ ಅವಳ ಯೋಚನೆ, ಅವಳ ಮೌನದಿಂದ ವಿಸ್ತರಿತವಾಗುವ ನನ್ನ ಕಲ್ಪನೆ ಇಷ್ಟ ನನಗೆ ಎಂದುಕೊಳುತ್ತಾ ಸಾರು ಕುದಿಯುವುದನ್ನೆ ನೋಡುತ್ತಿದ್ದಳು.


ನಮ್ಮಿಬ್ಬರ ಓದಿನ ಪ್ರತಿ ಹಂತದಲ್ಲೂ ಅಮ್ಮ ಖುಷಿಯಾಗಿ ಪಾಲ್ಗೊಂಡಿದ್ದಾಳೆ. ಅಕ್ಕನ ಮದುವೆಯಲ್ಲೂ ಅವಳ ಕಣ್ಗಳು ಖುಷಿಯಿಂದ ಅರಳಿದ್ದವು, ಆದರೆ ನನ್ನ ಮದುವೆಯ ಸಿದ್ದತೆಗಳನ್ನು ಆಸಕ್ತಿಯಿಂದ ಮಾಡುತ್ತಿದ್ದವಳು ಮದುವೆಯ ದಿನ ಸುಮ್ಮನಾಗಿಬಿಟ್ಟಿದ್ದಳು. ಯಾವುದರಲ್ಲೂ ಆಸಕ್ತಿ ಇರದ ಹಾಗೆ ಇದ್ದಳು,.. ಕಡೇ ಪಕ್ಷ ನನ್ನ ಕಳಿಸಿಕೊಡುವಾಗ ಕೂಡ ಅಳಲಿಲ್ಲ ಕಣ್ಣು ಶೂನ್ಯದೆಡೆಗೆ...
ಅಮ್ಮ ಯಾಕವತ್ತು ಹಾಗಿದ್ದೆ ಅಂದರೆ ತುಂಬ ಹೊತ್ತಿನ ನಂತರ ಇದಕ್ಕೂ ಉತ್ತರ ಕೊಡುವುದಿಲ್ಲವೇನೋ ಅಂದುಕೊಳುತ್ತಿದ್ದಾಗ ನಿಧಾನವಾಗಿ ಹೆಳಿದಳು
"ನಿಮ್ಮಪ್ಪ ಇದ್ದಾಗ ಅಂಥವರನ್ನು ಅರ್ಥಮಾಡಿಕೊಳ್ಳಬೇಕೆಂಬ ಕನಸಿತ್ತು, ಅವರು ಸತ್ತಾಗ ಎಲ್ಲ ಶೂನ್ಯ ಅನ್ನಿಸುತ್ತಿತ್ತು. ಆದ್ದರೆ ನಿಮ್ಮನ್ನು ಚೆನ್ನಾಗಿ ಓದಿಸುವ ಕನಸು ಕಟ್ಟಿಕೊಂಡೆ. ನಿಮ್ಮ ಓದಾದಮೇಲೆ ನಿಮ್ಮಗಳ ಮದುವೆಯ ಕನಸು, ನಿನ್ನ ಮದುವೆಯಾದ ಮೇಲೆ ಮತ್ತೆ ಶೂನ್ಯಕ್ಕೆ ಹಿಂತಿರುಗಿದೆ. ನಿಮಗಾಗಿ ನನ್ನ ಜೀವನ ಮುಡುಪಿಟ್ಟೆ ಅನ್ನೊ ಬೊಗಳೆ ಮಾತು ಹೇಳೊಲ್ಲ ನಾನು. ಬದುಕೊಕ್ಕೆ ಕನಸು ಬೆಕಿತ್ತು. ನಿಮ್ಮಗಳ ಭವಿಷ್ಯದ ಕನಸು, ಸುಖದ ಕನಸು, ನಿಮ್ಮ ಸುಖ-ದುಃಖ, ಆಸೆ, ಅಚ್ಚರಿ, ಅಳು, ಪ್ರತಿಯೊಂದನ್ನೂ ನನ್ನ ಜೊತೆಗೇ ಹಂಚಿಕೊಳ್ಳುತ್ತಿದ್ದಿರಿ 'ನನ್ನ ಬಿಟ್ಟರೆ ನಿಮಗೆ ಇನ್ಯಾರೂ ಇಲ್ಲ' ಅನ್ನೋಭಾವನೆಯೇ ಖುಷಿ ಕೊಡುತ್ತಿತ್ತು ನಂಗೆ. ಆದರೆ ನೀನು ಮದುವೆಯಾಗಿ ಹೋದಾಗ ಎಲ್ಲ ಕಳಕೊಂಡ ಭಾವ ನಿನ್ನ ಮದುವೆ ಸಮಯದಲ್ಲಿ ಕವಿದ ಶೂನ್ಯ ಭಯಂಕರವಾದದ್ದು ನನಗೆ ಬದುಕೋಕ್ಕೆ ಬೇರಾವ ಕನಸುಗಳೂ ಇಲ್ಲ ನನ್ನ ಮೇಲೆ ಯಾರೂ ಅವಲಂಬಿತವಾಗಿಲ್ಲ ಅನ್ನೊ ವಾಸ್ತವ ಕಣ್ಣೆದುರಿಗೆ.....

ಅಂದಿದ್ದಳು ಅಂದುಕೊಳ್ಳುತ್ತಿದ್ದಾಗ ರಾಘವ ಧಡಾರಂತ ಬಾಗಿಲು ತಳ್ಳಿಕೊಂಡು ಒಳಗೆ ಬಂದು ಶೂಸು ಬಿಚ್ಚುತ್ತಾ ಅವನ ಸ್ಕೂಲಿನಲ್ಲಿ ನೆಡೆದುದ್ದನ್ನು ವರದಿ ಒಪ್ಪಿಸಲು ಶುರುಮಾಡಿದಾಗ, ಅವಳು ತನ್ನ ಆಲೊಚನೆಯ ಸರಣಿಯಿಂದ ಹೊರಬಂದು ಅವನ ಮುದ್ದು ಮಾತುಗಳಲ್ಲಿ ಮುಳುಗಿಹೋದಳು.

Sunday, August 12, 2007

ವನಸಿರಿಯ ಮಗಳು

ಯಾರೂ ಓಡಾಡದಿದ್ದಲ್ಲಿ ಅವಳಿದ್ದಳು

ಜೊತೆಗೆ ಕಾವೇರಿಯ ಝರಿ

ಇವಳನ್ನು ಹೊಗಳಲು ಯಾರೂ ಇರಲಿಲ್ಲ

ಪ್ರೀತಿಸುವವರು ಇನ್ನ್ಯಾರು




ಅವಳ ಓಡಾಟವೆಲ್ಲಾ ಹಸಿರ ಬಳಿ

ಜೊತೆಗೆ ಬೆಚ್ಚಗಾಗುತಿಹ ಸೂರ್ಯ

ದನಿಗೂಡಿಸಲು ಕೋಗಿಲೆಗಳಿವೆ

ಅಲ್ಲಿ ಇನ್ನೆಲ್ಲಿಯ ಕ್ರೌರ್ಯ




ಅವಳ ಊಟ ಕಾಡು ಫಲ

ಕುಡಿಯುವುದು ಮಕರಂದ

ವನಸಿರಿಯ ಮಗಳಲ್ಲವೇ

ನೋಡಲು ಬಲುಚಂದ




ಎಲೆಯ ಮರೆಯ ಸಂಪಿಗೆ

ಕಣ್ಣಿಗೆ ಕಾಣದೆ ಅಡಗಿಹಳು

ರಾತ್ರಿಯ ಒಂಟಿ ನಕ್ಷತ್ರ

ಬೆಳ್ಳನೆ ಬೆಳಗುತಿಹಳು




ಅವಳಿದ್ದಳೆಂಬುದೇ ಕೆಲವರಿಗೆ ಗೊತ್ತಿದ್ದು

ಸತ್ತರೆ ಹೇಗೆ ತಿಳಿಯಬೇಕು;

ಅವಳೀಗ ಮಣ್ಣಲ್ಲಿ ಮಣ್ಣಾಗಿದ್ದಾಳೆ

ಸಂಕಟವನ್ನು ನಾನೆಲ್ಲಿ ಬಚ್ಚಿಡಬೇಕು!







ಇದು William Wordsworthನ She dwelt amoung the untrodden waysನ ಭಾವಾನುವಾದ ಆ poem ಹೀಗಿದೆ



She dwelt among the untrodden ways

Beside the springs of Dove;

A Maid whom there were none to praise

And very few to love



A violet by a mossy stone

Half hidden from the eye

Fair as a star when only one

Is shining in the sky



She lived unknown and few could know

When Lucy ceased to be

She is in her grave, and,Oh!

The difference to me

Wednesday, August 1, 2007

ಮರೆತು ಹೋದವಳು

ಕಣ್ಣೀರು ತಡೆಯಕ್ಕೆ ಆಗ್ತಾ ಇಲ್ಲ...

ಗಂಡಸರು ಅಳಬಾರದು ಅಂತಾರಲ್ವ?? 'ಮದುವೇಲಿ ಹುಡುಗಿ ಅತ್ತರೆ ಎನೇ ಕಾರಣ ಇದ್ದರೂ ತವರು ಮನೆ ಬಿಟ್ಟು ಹೋಗುತ್ತಿದ್ದಾಳೆ ಅಂತ ಅಳುತ್ತಿದ್ದಾಳೆ' ಅಂದುಕೊಳ್ತಾರೆ ಈ ಮದುವೆ ಆಗಿ ನಿನ್ನಿಂದ ದೂರ ಆಗ್ತಿದೀನಿ ಅಂತ ಗೊತ್ತಾದರೂ ದು:ಖ ಆಗಬಾರದ? ಅಳು ಬಂದರೆ ಏನು ತಪ್ಪು?

ಮೊದಲನೇ ಸಾರಿ ನಾನು ಸಾಗರ ಸಮ್ಮುಖದಲ್ಲಿ ನಿನ್ನೊಳಗಿಳಿದಾಗ ನಿನ್ನ ಬಿಳಿಗೆನ್ನೆಮೇಲಿದ್ದ ಕಣ್ಣೀರು, ಕೂಗಬಾರದೆಂದು ನೀನು ತುಟಿ ಕಚ್ಚಿದ್ದರಿಂದ ಜಿನುಗಿದ ರಕ್ತ, ನನ್ನ ಕಣ್ಣು ಚ್ಚುಚ್ಚುತ್ತಿದೆ.
ಹ್ಮ್ ಮ್... ನಿನ್ನ ಆಸೆಗಳೇ ಹಾಗೆ ನೀನು ಎಷ್ಟು ಹತ್ತಿರವಾಗಿ ಸಿಕ್ಕಿದ್ದೆ ನನ್ನ ರೂಮಿನಲ್ಲೇ ಆದರೆ ನನಗೆ ನಿನ್ನ ಕೈ ಮುಟ್ಟೊಕ್ಕೆ ಬಿಟ್ಟಿರಲಿಲ್ಲ ನೀನು ನಿನ್ನ ಸೇರಬೇಕೆಂದರೆ ಅದು ಕಡಲ ಮುಂದೆಯೋ, ಜಲಪಾತದೆದುರಿಗೋ, ಹರಿಯುವ ನದಿ ಪಕ್ಕದಲ್ಲೋ ,ಸುಡುವ ಬಂಡೆಗಲ್ಲ ಮೇಲೊ....

ಅವತ್ತು ನನ್ನ ಮನೆಯಲ್ಲಿ ನಾವಿಬ್ಬರೇ ನಾನು ನಿನ್ನ ಆಸೆಯಿಂದ ನೋಡುತ್ತಿದ್ದರೆ
"ಯಾವುದೊ ರೂಮಿನ ಮೂಲೆಯಲ್ಲಿ ನನ್ನ ಮೀಸಲು ಮುರಿಯೋಕ್ಕೆ ಇಷ್ಟ ಇಲ್ಲ. ಕಡಲೆಂದರೆ ಆಸೆ ನಂಗೆ, ನೀನು ಕಡಲೂರಿನವನು ಸಮುದ್ರದೆದುರಿಗೆ ಬೆಳ್ದಿಂಗಳ ರಾತ್ರಿಯಲ್ಲಿ ಕಡಲ ಶಬ್ಧ ಕೇಳುತ್ತಾ ನಮ್ಮಿಬ್ಬರ ಮಿಲನವಾಗಲಿ ನನಗೂ ಇನ್ನು ಹೆಚ್ಚು ವರ್ಷ ತಡೆಯೋಕ್ಕಾಗಲ್ಲ ವರ್ಷ 24ಆಯಿತು ಅಂದಿದ್ದೆ.

ನೀನು ಯಾವತ್ತೂ ಹೀಗೆ.. ನೇರ- ನೇರ. ನನ್ನ ಕಣ್ಣ ಬೇಡಿಕೆ ಅರ್ಥವಾಗುತ್ತಿತ್ತು ನಿನಗೆ.
"ಕಾಡು ಕುದುರೆ ಸವಾರಿಗೆ ಸಿದ್ದವೇ ಹುಡುಗ?" ಎಂಡು ಕೇಳಿ ಝಲ್ಲನೆ ನಗುತ್ತಿದ್ದೆ ಅಷ್ಟೇ ಬೇಗ ತೆಕ್ಕೆಗೆ ಬಂದು ಬಿಡುತ್ತಿದ್ದೆ.
ಕ್ರೂರಿ ನೀನು ಯಾಕೆ ಹೀಗೆ ನೆನಪಾಗ್ತಾ ಇದ್ದೀಯ?? ಪುರೋಹಿತರು ಗೊಣಗುತ್ತಾ ಇದ್ದಾರೆ ಸರಿಯಾಗಿ ಮಂತ್ರ ಹೆಳುತ್ತಿಲ್ಲ ನಾನು ಅಂತ. ನಿನ್ನ ನೆನಪುಗಳಿಂದ ಕಳಚಿಕಂಡು ಮಂತ್ರ ಪಠಿಸೋದಾದರೂ ಹೇಗೆ?

ನನ್ನ ಪಕ್ಕದಲ್ಲಿ ಕುಳಿತಿರುವ ಹುಡುಗಿ ಎಷ್ಟು ಸಪೂರ- ಸಪೂರ ಬಗ್ಗಿಸಿದ ಕತ್ತು ಎತ್ತಿಲ್ಲ ,ನೀನೇ ಇಲ್ಲಿದ್ದಿದ್ದರೆ ದಿಟ್ಟ ಕಣ್ಣುಗಳಿಂದ ನನ್ನೇ ನೋಡುತ್ತಿರುತ್ತಿದ್ದೆ.. ಆದರೆ ನೀ ಇಲ್ಲಿರಲು ಹೇಗೆ ಸಾಧ್ಯ?

ಅವತ್ತು ನೀನು ನನ್ನ ಭುಜದ ಮೇಲೆ ಗಲ್ಲವನ್ನಿಟ್ಟುಕೊಂಡು ಮುದ್ದುಮುದ್ದಾಗಿ
"ಜಲತರಂಗದ ಸದ್ದು ಇದಕ್ಕಿಂತ ಚೆನ್ನಗಿರುತ್ತಾ?"
ಅಂತ ಕೇಳಿದ್ದೆ ಜಿಂಕ್ ಶೀಟಿನ ಮೇಲೆ ಬೀಳುತ್ತಿದ್ದ ಮಳೆ ಸದ್ದು ಕೇಳುತ್ತ.. ನಿನ್ನ ತುಂಬಿದ ಬಿಳಿಗೆನ್ನೆ ಕಚ್ಚಿಹಾಕಬೇಕೆನಿಸಿತ್ತು ಆವಾಗ.

ನಿನ್ನಷ್ಟು ಚಂದದ ಹುಡುಗಿ ಸುಮ್ಮನೆ ನನ್ನ ಬಳಿ ಬಂದ್ದಾದರೂ ಹೇಗೆ? ಎಂದು ಯೋಚಿಸುತ್ತಿರುತ್ತೇನೆ ಬಹಳ ಸಲ, ಅಂತೆಯೇ ಏನೂ ಕಾರಣ ಕೊಡದೆ ನನ್ನಿಂದ ದೂರವಾದ ಮೇಲೂ...

ನಿಂಗೆ ಅವತ್ತಿನ ದಿನ ನೆನಪಿದೆಯ? ಎಂದಿನಂತೆ ಬೆಳದಿಂಗಳ ರಾತ್ರಿಯಲ್ಲಿ ಕಡಲೆದುರಿಗೆ ಕುಳಿತಿದ್ದೆವು ಭೊರ್ಗರೆಯುವ ಕಡಲೆದುರಿಗೆ ಮೌನ ದೇವತೆ ನೀನು. ಆದರೆ ಅವತ್ತು ಕೇಳಿದ್ದೆ

"ಈಗ ಕಡಲನ್ನು ನೋಡಿದ್ರೆ ಹೇಗನ್ನಿಸುತ್ತೆ ನಿಂಗೆ... "

"ಅದರ ಭೋರ್ಗರೆತ ಗಂಡಸಿನ ಆವೇಷದಂತೆ.." ಎನ್ನುವುದು ನನ್ನ ಉತ್ತರ..

ನೀನು ಸ್ವಲ್ಪ ಹೊತ್ತು ಸುಮ್ಮನಿದ್ದು ಮುಂದುವರಿದೆ

"ನಮ್ಮ ಕವಿಗಳು ನದೀನ ಹೆಣ್ಣಿಗೆ ಸಮುದ್ರನ ಗಂಡಸಿಗೆ ಹೋಲಿಸುತ್ತಾರೆ .ಪೌರಾಣಿಕ ಪುಸ್ತಕಗಳಲ್ಲಿ ಸಮುದ್ರ ರಾಜನ ಕಲ್ಪನೆ ಬರುತ್ತೆ...ಅದಕ್ಕೆ ನಾವೆಲ್ಲ ಸಮುದ್ರದ ಭೊರ್ಗರೆತದಲ್ಲಿ ಗಂಡಸಿನ ಆವೇಶ ಕಾಣುತ್ತೀವಿ. ಆದ್ರೆ ನಂಗೆ ಈ ಬೆಳ್ದಿಂಗಳ ರಾತ್ರಿಯಲ್ಲಿ ಕಡಲು ಹೆಣ್ಣಾಗಿ ಕಾಣ್ತಾಳೆ, ಅವಳ ನಗ್ನತೆಯನ್ನು ತನ್ನ ತೆಳು ಬೆಳ್ಳನೆ ಹೊದಿಕೆಯಿಂದ ಮುಚ್ಚಿದಾನೆ ಎನ್ನಿಸುವ ಚಂದ್ರ, ನಿದ್ದೆಯಲ್ಲಿ ಮಗ್ಗಲು ಬದಲಿಸುತ್ತಿರುವಳೋ ಎನ್ನುವಂತೆ ದಡ ಮುಟ್ಟುವ ಅಲೆಗಳು... "
ಅವತ್ತಿನಿಂದ ನನಗೆ ಕಡಲನ್ನು ಗಂಡೆಂದು ನೋಡಲು ಸದ್ಯವೇ ಆಗಿಲ್ಲ....

ನೀನು ಹೇಳದೇ ಕೇಳದೇ ನನ್ನ ಬಿಟ್ಟು ಹೋಗಿ ಐದು ವರ್ಷಗಳಾದರೂ ನಾನು ಬೇರೆಯವರನ್ನು ಮದುವೆಯಾಗಲು ಒಪ್ಪಿರಲಿಲ್ಲ ನಿನ್ನ ಬಂಗಾರು ಬಣ್ಣದ ಕಣ್ಣುಗಳು ನಿನ್ನನ್ನು ಮರೆಯಲು ಬಿಟ್ಟಿರಲಿಲ್ಲ...ಆದರೆ ಮದುವೆಯಾಗಲೇಬೇಕಿತ್ತು ನಿನ್ನ ಮರೆಯಲಾದರೂ ಈ ಹುಡುಗಿಯಲ್ಲಿ ನಿನ್ನ ಹುಡುಕುವುದಿಲ್ಲ ನಾನು. ನನಗೆ ಒಂದು ಮಾತೂ ಹೇಳದೇ ಹೋದವಳಿಗೆ ಇನ್ನೇನು ಶಿಕ್ಷೆ ಕೊಡಲಿ?

"ಸಂತು ನೆನಪು ಬರ್ತಾ ಇದೆ ಬೀಚ್ ಹತ್ರ ಹೋಗ್ತೀನಿ"
ಅಂತ ನಿನ್ನ ಸ್ನೇಹಿತೆಗೆ ಹೇಳಿ ಹೋದವಳು ಎಷ್ಟು ಹೊತ್ತಾದರೂ ವಾಪಸ್ಸು ಬಂದಿರಲಿಲ್ಲ ಅವಳು ಗಾಭರಿಗೊಂಡು ಫೊನ್ ಮಾಡಿದ್ದಳು ನಾನು ದಡಬಡಿಸಿ ಬೆಂಗಳೂರಿನಿಂದ ಓಡಿ ಬಂದಿದ್ದೆ... ನಮ್ಮ ಘಾಬರಿ ಧಾವಂತಗಳು ಕಡಲಾಳಡಲ್ಲಿ ನೆಮ್ಮದಿಯ ಚಿರನಿದ್ದೆಗೆ ಇಳಿದವಳಿಗೆ ಹೇಗೆ ಗೊತ್ತಾಗಬೇಕು ನೆನಪಾಗಿ ಕಾಡಬೇಡ ಇನ್ನು ನಿನ್ನವನಲ್ಲ ನಾನು....