Monday, June 11, 2007

ಕಾಣದ ಕಡಲಿಗೆ ಹಂಬಲಿಸುವ ಮನ. . .

ನನಗೆ ಅಹಂಕಾರ!

ನನಗೇ ಅಹಂಕಾರ! ಅದಕ್ಕೆ ಹೀಗಾಯ್ತು, ಅಂತ ಗಟ್ಟಿಯಾಗಿ ನನಗೆ ನಾನೇ ಕೇಳೋ ಹಾಗೆ ಹೇಳಿಕೊಂಡೆ.
ಭಾವ ಗೀತೆ ಕೇಳಿದ್ರೆ ಮನಸ್ಸಿಗೆ ಸಮಾಧಾನ ಆದ್ರೂ ಆಗುತ್ತೇನೋ ಅನ್ನಿಸಿ ಡಿ ವಿ ಡಿ ಪ್ಲೇಯರ್ ಆನ್ ಮಾಡಿದ್ರೆ ಮೊದಲಿಗೇ ಅವನಿಗಿಷ್ಟವಾದ ಹಾಡು - "ತೊರೆದು ಹೋಗದಿರು ಜೋಗೀ..ಅಡಿಗೆರಗಿಹ ಈ ದೀನಳ ಮರೆತು..."
ಸಿಟ್ಟು ಬಂದು ಮುಂದಿನ ಬಟನ್ ಅಮುಕಿದೆ. ಆದ್ರೆ ಆವನ ನೆನಪು ಬರುತ್ತೆ ಅಂತ ಆ ಹಾಡು ಕೇಳದೇ ಇರೋದು ಪಲಾಯನವಾದ. ಹಾಡು ಅವನದೇನು ಸ್ವತ್ತಲ್ಲವಲ್ಲ! ಒಂದು ಹಾಡು ಅವನ ನೆನಪು ತರಿಸಿ ನನ್ನ ವಿಚಲಿತಗೊಳಿಸುತ್ತೆ ಅನ್ನೋದು ಸುಳ್ಳು ಅನ್ನಿಸಿ, ಮತ್ತೆ ಹಿಂದಿನ ಬಟನ್ ಒತ್ತಿದಳು.

ಸಿಟ್ಟು ಯಾರ ಮೇಲೆ? ಅವನ ಮೇಲೋ?? ಅವನಿಗೆ ಅರ್ಥವಾಗದ ತನ್ನ ವ್ಯಕ್ತಿತ್ವದ ಮೇಲೋ??
ಇಷ್ಟು ವರ್ಷದ ಸ್ನೇಹದಲ್ಲಿ ಎಂತೆಂಥಾ ಕಷ್ಟದ ಗಳಿಗೆಯಲ್ಲೂ ಅವನು ನನಗೆ - ನಾನು ಅವನಿಗೆ ಆಸರೆಯಾಗಿದ್ದೀವಿ, ಒಬ್ಬರಿಗೊಬ್ಬರು ಸಮಾಧಾನ ಮಾಡಿದ್ದೀವಿ, ತುಂಬಾ ಭಾವುಕರಾಗಿ ಭಾವನೆಗಳನ್ನ ಹಂಚಿಕೊಂಡಿದ್ದೀವಿ, ಒಬ್ಬರಿಗೊಬ್ಬರು ವಾಸ್ತಾವಿಕತೆಯ ಪಾಠ ಹೇಳಿದ್ದೀವಿ, ಬದುಕನ್ನ ಸಮರ್ಥವಾಗಿ ರೂಢಿಸಿಕೊಳ್ಳೋದನ್ನ ಕಲಿತಿದ್ದೀವಿ ಅಂದುಕೊಳ್ಳುತ್ತಿದ್ದಾಗ.. "ಅಮ್ಮಾ.." ಅಂತ ಪುಟ್ಟಿ ಕರೆದಿದ್ದು ಕೇಳಿಸಿತು. ಅವಳು ಕಟ್ಟಿದ ಆಟದ ಮನೆ ನೋಡಿ ಇವಳ ತಂದೇನೋ ತಾಯಿನೋ ಸಿವಿಲ್ ಎಂಜಿನೀರ್ ಇರ್ಬೇಕು ಅನ್ನಿಸಿತು."ಚೆನ್ನಾಗಿದೆ ಕಂದ, ಆದ್ರೆ ಆ ಮರ ರಸ್ತೆ ಮಧ್ಯ ಇದೆ ಅನ್ಸುತ್ತೆ , ಮನೆ ಪಕ್ಕದಲ್ಲಿಡು" ಅಂದೆ.

ಮಗು ದತ್ತು ತೊಗೋತೀನಿ ಅಂದಾಗ ಮನೆಯವರೆಲ್ಲ ಎಷ್ಟು ಕೂಗಾಡಿದರು! ಅಪ್ಪ ಮಾತು ಬಿಟ್ಟರು .ಮದುವೆನೇ ಆಗದೇ ಮಗು ಹುಚ್ಚು ಯಾಕೆ ನಿಂಗೆ ? ಅಂತ ಅಮ್ಮ ಎಷ್ಟು ಬೈದರು.. ಇವನು ನನಗೆ ಒತ್ತಾಸೆಯಾಗಿ ನಿಲ್ಲದಿದ್ದರೆ ಮಗು ದತ್ತು ತೊಗೋಳಕ್ಕಾಗುತ್ತಿತ್ತ ನನಗೆ? ಅನ್ನೋದು ಜ್ಞಾಪಕಕ್ಕೆ ಬಂದು, "ಎಷ್ಟು ಒಳ್ಳೆಯವನಲ್ಲವ." ಅಂದುಕೊಂಡೆ.

ಮೊದಲೆಲ್ಲಾ ಎಷ್ಟು ಜಗಳ ಆಗಿದೆ! ಆವಾಗಲೆಲ್ಲ ಜಗಳದ ನಂತರದ ಮೌನ ರಾಜಿಗೆ ಹಾತೊರೀತಿತ್ತು. ಆದರೆ ಮೊನ್ನೆ ಮೌನವಾಗಿ ಅಕ್ಕಪಕ್ಕದಲ್ಲೇ ಅರ್ಧಗಂಟೆ ಕೂತಿದ್ವಲ್ಲ ! ಮೌನಾನೂ ಜಗಳ ಆಡ್ತಿದೆ ಅನ್ನಿಸಿ ಹಿಂಸೆ ಆಗ್ತಿತ್ತು ನಂಗೆ. ಅವನು ಅಲ್ಲಿಂದ ಎದ್ದು ಹೋಗಿ ಒಳ್ಳೆಯ ಕೆಲಸ ಮಾಡಿದ ಅನ್ನಿಸಿತು.

ಅವನು ಪುಸ್ತಕಗಳನ್ನು ತುಂಬಾ ಪ್ರೀತಿಸ್ತಿದ್ದ.. ಯಾವಾಗಲು ಶಾಪಿಂಗೂ, ಸಿನೆಮಾ ಅಂತ ತಿರ್ಗತಿರ್ತೀಯಾ ಈ ಪುಸ್ತಕ ಓದು ಅಂತ ಕಾರಂತರ 'ಬೆಟ್ಟದ ಜೀವ' ಕೈಯಲ್ಲಿಟ್ಟಿದ್ದ. ಆಮೇಲೆ ನಾನಂತೂ ಪುಸ್ತಕಗಳಲ್ಲೇ ಮುಳುಗಿ ಹೋದೆ. ಆಮೇಲೇನು ಪುಸ್ತಕಗಳ ಬಗ್ಗೆನೇ ಮಾತಾಡಿದ್ದು, ಭೈರಪ್ಪ, ಕಾರಂತ, ಬೀ ಜಿ ಎಲ್ ಸ್ವಾಮಿ, ಮಾಸ್ತಿ, ಗೊರೂರು, ಕುವೆಂಪು.. ಇವರುಗಳ ಮಧ್ಯಾನೇ ಓಡಾಡಿದ್ದು.

ಈಗ್ಯಾಕ್ ಹಿಂಗಾಡ್ತಿದಾನೆ? ದುಬೈ ನಿಂದ ಬಂದವನು ಸೀದ ನನ್ನ ಮನೆಗೆ ಬಂದ. ಅವನು ನನ್ನ ಕಡೆಗೆ ನೋಡಿದ ನೋಟದಲ್ಲೇ ಅನ್ನಿಸಿತು ನನ್ನ ಬಗೆಗೆ ಇರೋ ಭಾವ ಬಾರಿ ಸ್ನೇಹದ್ದ್ಡಾಗಿ ಉಳಿದಿಲ್ಲ, ಮತ್ತೆ ಅವನನ್ನು ಸ್ನೇಹದ ಟ್ರಾಕ್ಗೆ ತರೊಕ್ಕೆ ಎರಡು ದಿನ ಆದ್ರೂ ಬೇಕು ಅಂತ.

ಮಕ್ಕಳು ಅಂದರೆ ಅವನಿಗೆ ಪ್ರಾಣ. ತನ್ನ ಅಣ್ಣನ ಮಗು ಇನ್ನೂ ತೊಟ್ಟಿಲಲ್ಲಿರುವಾಗಲೇ ಎಷ್ಟು ಮಾತಾಡಿಸುತ್ತಿದ್ದ, ಆಟ ಆಡಿಸುತ್ತಿದ್ದ .. 'ಜನ ಗಣ ಮನ', 'ಸಾರೆ ಜಹಾನ್ಸೆ ಅಛ್ಚಾ' ಹೇಳಿ ಮಲಗಿಸುತ್ತಿದ್ದ ! ಇವನನ್ನು ಹೊರಗಡೆಯವರು ನೋಡಿದರೆ ಮೆಂಟ್ಲೂ ಅಂತ ಅಂದುಕೋತಿದ್ರು. ಯಾರಾದರೂ ಯಾಕೆ ಈ ಹಾಡು ಹಾಡಿ ಮಲಗಿಸುತ್ತೀಯ ? ಅಂದ್ರೆ "ಚಿಕ್ಕ ವಯಸ್ಸಿನಿದಲೇ ದೇಶ ಭಕ್ತಿ ಬರಲಿ" ಅಂತ ಅನ್ನುತ್ತಿದ್ದ.ಆದ್ರೆ ನನ್ನ ಹತ್ರ ಮಾತ್ರ 'ನಂಗೆ ಅವೆರೆಡು ಹಾಡು ಬಿಟ್ರೆ ಬೇರೆ ಯಾವ ಹಾಡು ಪೂರಾ ಬರೋಲ್ಲ ಕಣೆ' ಅಂದಿದ್ದ.ಅವರ ಅಣ್ಣನ ಮಗು ಅಂತೂ ಇವನನ್ನೇ ಅಪ್ಪ ಅನ್ನುತ್ತಿತ್ತು. ಈಗ ನನ್ನ ಮಗುನೂ ನನಗಿಂತ ಹೆಚ್ಚಾಗಿ ಅವನೇ ಪ್ರೀತಿಸುತ್ತಾನೆ ಅನ್ನಿಸುತ್ತೆ. ಪುಟ್ಟಿಯಂತೂ ಇವನನ್ನ ತುಂಬಾ ಹಚ್ಚಿಕೊಂಡುಬಿಟ್ಟಿದೆ . ಪುಟ್ಟಿನ ದತ್ತು ತಗೊಂಡಾಗ ಯಾವತ್ತೂ ಮಗುವಿಗೆ ತಾನು ದತ್ತು ಮಗು ಅನ್ನೋ ಭಾವನೆ ಬರದ ಹಾಗೆ ನೋಡಿಕೊ ಅಂತ ಭೋದಿಸಿದ್ದ.

ಈಗ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾನೆ ಇಲ್ಲ. ಅನ್ಯ ಮನಸ್ಕನಾಗಿ ಏನೇನೋ ಮಾತಾಡುತ್ತಿದ್ದ. ಅಲ್ಲಿನ ಮುಸ್ಲಿಮ್ ಗಂಡಸರ ಬಗ್ಗೆ, ಯಾವಾಗಲೂ ಬುರಖಾದಲ್ಲಿ ಮುಳುಗಿರೋ ಅವರ ಹೆಂಡತೀರ ಬಗ್ಗೆ, ಅಲ್ಲಿ ಚೀಪಾಗಿ ಸಿಗೋ ಚಿನ್ನದ ಬಗ್ಗೆ- ಹೀಗೆ ಏನೇನೋ... ನನಗೆ ಹಿಂಸೆ ಆಗುತ್ತಿತ್ತು. "ದಯವಿಟ್ಟು ಕಣೋ , ಅದೇನು ಮನಸ್ಸಿನಲ್ಲಿದೆಯೋ ಹೇಳು. ಸುಮ್ಮನೇ ಏನೇನೋ ಮಾತಾಡಬೇಡ ನೀ ನಾಟಕ ಮಾಡೋದನ್ನ ನನ್ನಕೈಲಿ ನೋಡಕ್ಕಾಗಲ್ಲ "ಅಂದೆ.

ಅವನಿಗೆ ದುಂಡು ಮಲ್ಲಿಗೆ ತುಂಬಾ ಇಷ್ಟ ಆಗೋದು. ಇನ್ನೂರು ಮುನ್ನೂರು ಗ್ರಾಂ ಬಿಡಿ ದುಂಡು ಮಲ್ಲಿಗೆ ತಂದು ಅತ್ತಿಗೆಗೆ ಕೊಟ್ಟು 'ಅತ್ತಿಗೆ ಹೂಕಟ್ಟಿ ದೇವರಿಗೆ ಇಟ್ಟು, ನೀವು ಮುಡುಕೊಳಿ, ಅಮ್ಮನಿಗೂ ಕೊಡಿ.' ಅಂತಿದ್ದನ್ನ ನಾನೇ ನೋಡಿದ್ದೆ. ಇನ್ನು ನನ್ನ ಮನೆಗೆ ಬಂದರೆ ಅವನೇ ದೇವರ ಮನೆಗೆ ಹೋಗಿ ಅಲ್ಲಿ ನಾನು ಹಾಕಿರೋ ರಂಗೋಲಿ ತುಂಬಾ ಸಾವಧಾನವಾಗಿ ದುಂಡು ಮಲ್ಲಿಗೆ ತುಂಬಿಸಿ 'ನೋಡೇ! ಎಷ್ಟು ಚೆನ್ನಾಗಿ ಕಾಣುತ್ತೇ ನಿನ್ನ ರಂಗೋಲಿ, ನನ್ನ ದುಂಡು ಮಲ್ಲಿಗೆ ಹೂವಿಲ್ಲ ಅಂದ್ರೆ ಚೆನ್ನಾಗಿ ಕಾಣೋದೇ ಇಲ್ಲ' ಅಂತ ತನ್ನ ಬೆನ್ನು ತಾನೇ ತಟ್ಟಿಕೊಂಡಿದ್ದ.

"ಮನೇಲಿ ಹುಡುಗಿ ಹುಡುಕ್ತಿದಾರೆ ಕಣೇ, ನಿನ್ನನ್ನ ಎಲ್ಲಿ ಕಳೆದುಕೊಂಡು ಬಿಡ್ತೀನೋ ಅಂತ ಭಯ ಆಗ್ತಿದೆ. ನಾನು ಮದುವೆ ಆದಮೇಲೆ ನಿನ್ನ ಜೊತೆ ಹೀಗೆ ಇರಕ್ಕಾಗುತ್ತಾ?? ಮನಸ್ಸು ಬಂದಾಗಲೆಲ್ಲ ನಿನ್ನ ಮನೆಗೆ ಬಂದು ಗಂಟೆಗಟ್ಲೆ ಮಾತಾಡಿ ಬದ್ನೇಕಾಯಿ ಬಜ್ಜಿ , ಅಕ್ಕಿ ರೊಟ್ಟಿ, ಆಲೂ ಪರಾಟಾ, ಚಿನೀಸ್ ನೂಡಲ್ಸ್ ಅಂತ ಅಡುಗೆಗಳಲ್ಲಿ ಎಕ್ಸ್ಪೇರಿಮೆಂಟ್ ಮಾಡೋಕ್ಕಾಗುತ್ತಾ?? ನಿನ್ನ ಮಗೂನ ಹೀಗೆ ಮುದ್ದುಗರೆಯೊಕ್ಕಾಗುತ್ತಾ?? "
ಅಂತ ನನ್ನ ಕಣ್ಣುಗಳಲ್ಲಿ ಉತ್ತರ ಹುಡುಕಿದ. ಆದರೆ ನನ್ನ ಕಣ್ಣುಗಳು ಪ್ರಶ್ನೆ ಕೇಳುತ್ತಿದ್ದವು.. ಎಷ್ಟು ಸರ್‍ರ್ ಅಂತ ಸಿಟ್ಟು ಹತ್ತಿತು ಅವನಿಗೆ.

" ನಿನಗೆ ಅಹಂಕಾರ ಕಣೆ ಯಾಕೆ ಎಲ್ಲದನ್ನು ನನ್ನ ಬಾಯಲ್ಲೇ ಹೇಳಿಸಬೇಕು ಅಂತೀಯ ಅರ್ಥಮಾಡ್ಕೋ ನನ್ನ! ಸರಿ. ನಾನೇ ಹೇಳ್ತೀನಿ ಕೇಳು, ಹೌದು ನಿನ್ನ ಪ್ರೀತಿಸುತ್ತೀನಿ ನಾನು ನೀನು ನಂಗೆ ಪೂರ್ತಿ ಪೂರ್ತಿಯಾಗಿ ಬೇಕು. ಮದುವೆ ಆಗ್ತೀಯಾ ನನ್ನ?" ಅಂದ.

ಮೂರು ವರ್ಷದ ಹಿಂದೆ ನಾನು ಇವನಿಗೆ ಕೇಳಿದ ಮಾತನ್ನು ನನಗೆ ವಾಪಸ್ಸು ಕೇಳ್ತಿದಾನೆ ಅನ್ನಿಸಿ ಅವನ ಮುಖ ನೋಡಿದೆ.
"ಅಪ್ಪ ಅಮ್ಮನ ಚಿಂತೆ ಮಾಡ್ಬೇಡ ನಿಮ್ಮ ಮನೆಯೊರನ್ನ ಒಪ್ಪಿಸೋ ಜವಾಬ್ದಾರಿ ನಂದು ಹೇಗಾದ್ರೂ ಮಾಡಿ ಒಪ್ಪಿಸುತ್ತೀನಿ" ಅಂದ .

ಅಪ್ಪ ಅಮ್ಮನ್ನ ಹೇಗಾದ್ರೂ ಮಾಡಿ ಒಪ್ಸಾಣ ಕಣೋ.. ನಾನು ಆವತ್ತು ಅಂದಿದಕ್ಕೆ -
"ಹೇಗೆ ಒಪ್ಪಿಸುತ್ತಿಯ? ನಿಮ್ಮ ಜಾತಿಯವರಿಗೂ ನಮ್ಮ ಜಾತಿಯವರಿಗೂ ನಾವೇ ಮೇಲೂ ಅನ್ನೋ ಹಮ್ಮೂ... ನಮ್ಮ ಮನೇಲಿ ಶಿವಾಪೂಜೆ ನಿಷಿದ್ಧ, ನಾವು ಶ್ರೀ ವೈಷ್ಣವರು ಅನ್ನೋ ಅಹಂಕಾರ.. ನಿಮ್ಮ ಮನೇಲಿ ಶಿವನನ್ನು ಬಿಟ್ಟರೆ ಇಲ್ಲ ಅನ್ನುತ್ತಾರೆ, ಲಿಂಗಾಯಿತರು ಬ್ರಾಹ್ಮಣರಿಗಿಂತ ಶ್ರೇಷ್ಠ ಅನ್ನೋ ಭಾವನೆ. ಹೇಗಾದ್ರೂ ಅಂದ್ರೆ ಹೇಗೆ? ಅಂತ ಯೋಚಿಸಿದ್ದೀಯ? ಅಪ್ಪ ಅಮ್ಮನಿಗೆ ನೂವು ಮಾಡೋದು ಬೇಡ"
ಮೂರು ವರ್ಷದ ಹಿಂದೆ ಅಂದದ್ದು ನೆನಪಾಗಿ ಅವನ ಕಂಗಳನ್ನೇ ದಿಟ್ಟಿಸಿದೆ.
"ನೀ ಹಾಗೆ ನನ್ನ ನೋಡಬೇಡ ಏನಾದ್ರೂ ಮಾತಾಡು ಏನ್ ತಿಳ್ಕೊಳ್ಳಲಿ ನಾನು" ಅಂದ.

ಮೊದಮೊದಲು ಅವನನ್ನು ತನ್ನ ಕಣಿವೆಯಾಳಕ್ಕೆ ಇಳಿಸಿಕೊಂಡ ಹೆಣ್ಣಿನ ಬಗ್ಗೆ ಹೇಳಿಕೊಂಡಾಗ ನನಗೇನಾದರೂ ಅನ್ನಿಸಿತ್ತಾ ?? ಅನ್ನಿಸಿದ್ದು ಒಂದೇ.. ಸಧ್ಯ ಇವನು ದುಡ್ಡು ಕೊಟ್ಟು ಯಾರ ಹತ್ತಿರವೂ ಹೋಗಲಿಲ್ಲವಲ್ಲ ಅಂತ.ಅವಳು ಅಮೇರಿಕನ್ ಆದ್ದರಿಂದ ಏನು ಅನ್ನಿಸಲಿಲ್ಲವ? ಅಂತ ಮತ್ತೆ ಕೇಳಿಕೊಂಡಳು. ಅವಳು ಇವನಿಗೆ "dont kiss me - ಪ್ರೀತಿ ಇಲ್ಲದಿರೊವಾಗ ಕಿಸ್ಸಿಂಗ್ ಬೇಕಿಲ್ಲ" ಅಂದಿದ್ದಳಂತೆ.


ಆದರೆ ಪ್ರೀತಿಯೇ ಇಲ್ಲದಿರೋವಾಗ ಅಂತಹ ಸಂಬಂಧ ಹೇಗೆ ಸಾಧ್ಯವಾಗುತ್ತೆ? ಅದೂ ಇಷ್ಟೆಲ್ಲಾ ಯೋಚಿಸೋ ಹುಡುಗನಿಗೆ ಅಂತಹ ಜರೂರತ್ತಾದರೂ ಏನಿತ್ತು ಅನ್ನಿಸಿತು. ಈ ಪ್ರಶ್ನೆಯನ್ನೇ ಕೇಳಿದ್ದಕ್ಕೆ-

"ಊಟಕ್ಕೆ ಕರೆದಿದ್ದಳು, ಹಾಗೆ ಈ ಊಟವನ್ನೂ ಮಾಡಿಸುತ್ತಾಳೆ ಅಂತ ಗೊತ್ತಿರಲಿಲ್ಲ. ಅವಳ ಅವತ್ತಿನ ಜರೂರತ್ತಿರಬಹುದು ನಾನು, ಇಲ್ಲ ಭಾರತದ ಗಂಡಸುತನ ಹೇಗಿರುತ್ತೆ ಅಂತ ನೋಡೋ ಆಸೆ ಇರಬಹುದು, ಅದೇನೇ ಆಗಲಿ ನಾನು ಪರಿಪೂರ್ಣ ಗಂಡು ಅನ್ನೋ ಭಾವನೆ, ಅಹಂಕಾರ ತರಿಸಿದ್ದೇ ಅವಳು" ಅಂದವನ ಮೇಲೆ ಭಯಂಕರ ಸಿಟ್ಟು ಬಂದಿತ್ತು.

"ಮಿಲನ ಅಂದರೇನೇ ಎರಡು ಒಂದಾಗೋದು. ಎರಡು ಒಂದರೊಂದರಲ್ಲಿ ಮಿಳಿತವಾಗೋದು. ಐಕ್ಯದಲ್ಲಿ ಅಹಂಕಾರಕ್ಕೆ ಅರ್ಥ ಎಲ್ಲಿ ನಾನು ವಿಜ್ರಂಭಿಸಿದೆ ಅನ್ನೋವಾಗಲೇ ಅಹಂಕಾರ ಬರೋದು ಮೇಲನ ಬರೀ ವಿಜ್ರಂಭಣೆ ಆದರೆ ಅದು ಮಹೋತ್ಸವವಾಗೋಲ್ಲ, ಬರೀ ಕಾಮ ಅನ್ನಿಸಿಕೊಳ್ಳುತ್ತೆ. ಮುಗಿಲು ಕಣಿವೆಯೊಳಕ್ಕೆ ಮಳೆಯಾಗಿ ಇಳಿಯುತ್ತೆ, ನೆಲವನ್ನು ತಣಿಸುತ್ತೆ, ತಣಿಸಿ ತಾನು ಸುಖಿಸುತ್ತೆ. ಕಣಿವೆಯನ್ನ ಮಳೆಯಿಂದ ತುಂಬಿಸಿ ವಿಜ್ರಂಭಿಸುತ್ತೇನೆ ಅನ್ನೋ ಹುಂಬತನಕ್ಕೆ ಇಳಿಯೋಲ್ಲ" ಅಂತ ಆವೇಶದಲ್ಲಿ ಮಾತಾಡಿದ ಮೇಲೆ, ಮಾತಾಡಿದ್ದು ಹೆಚ್ಚಾಯಿತೇನೋ,ಇವೆಲ್ಲ ಅನುಭವವಿಲ್ಲದ ಪುಸ್ತಕದ ಬದನೇಕಾಯಿಯಾಗಿರುವ ತನ್ನ ಮಾತುಗಳೇನೋ ಎಂದು ಅನ್ನಿಸಿದರೂ ಕಣ್ಣುಗಳಲ್ಲಿನ ಕಾನ್ಫಿಡೆನ್ಸ್ ಬಿಟ್ಟುಕೊಡದೇ ಅವನನ್ನೇ ದಿಟ್ಟಿಸುತ್ತಿದ್ದರೆ ಅವನೂ ತುಂಬಾ ಹೊತ್ತು ದಿಟ್ಟಿಸಿ-
"ನೀನು, ನಿನ್ನ ಮೊದಲ ಮಿಲನ ಮಹೋತ್ಸವದ ಬಗ್ಗೆ ಹೇಳುತ್ತೀಯ ಅದು ಆದಾಗ?? ಅಂದಿದ್ದ. ಧ್ವನಿಯಲ್ಲಿ ವ್ಯಂಗ್ಯವಿತ್ತಾ? ಗೊತ್ತಿಲ್ಲ..

"ತಿಂಗಳಿಗೆ ಒಂದು ಲಕ್ಷ ಸಂಬಳ, ಓಡಾಡೋಕ್ಕೆ ಕಾರು, ಇಂದ್ರನಗರದಲ್ಲಿ ಮನೆ, ದಿನದ ಇಪ್ಪತ್ತುನಾಲ್ಕು ಗಂಟೆ ಇಂಟರ್ನೆಟ್ಟು ಫೆಸಿಲಿಟಿ, ಎಲ್ಲದಕ್ಕಿಂತ ಹೆಚ್ಚಾಗಿ ನಿನ್ನ ಕನಸುಗಳನ್ನು ನನ್ನ ಕನಸಾಗಿಸಿಕೊಂಡಿರುವ ಮತ್ತು ಎಲ್ಲರಿಗಿಂತ ನಿನ್ನನ್ನು ಹೆಚ್ಚಾಗಿ ಅರ್ಥ ಮಾಡಿಕೊಂಡಿರುವ ನಾನು. ಇನ್ನೇನು ಬೇಕು ಹೇಳೇ ನಿಂಗೆ? ನಿನಗೂ ಬಹಳಷ್ಟು ಹುಡುಗರು ಸ್ನೇಹಿತರಿದ್ದಾರೆ , ಯಾರಾದರೂ ನನಗಿಂತ ನಿನ್ನ ಅರ್ಥಮಾಡಿಕೊಂಡೋರು ಇದ್ದಾರ? ಇದ್ದರೆ ಹೇಳು. ನಾವು ಒಂದು ದಿನ ಆದ್ರೂ ಒಬ್ಬರನ್ನೊಬ್ಬರು ಇಂಪ್ರೆಸ್ ಮಾಡೋಕ್ಕೆ ಪ್ರಯತ್ನಿಸಿದ್ದೀವ? ನೀನು ನೀನಾಗಿ ಬರಿ ವಸುಂಧರೆಯಾಗಿ, ನಾನು ನಾನಾಗಿ ಬರೀ ರಾಜೇಶನಾಗಿ ಇನ್ಯಾರ ಜೊತೆಗಾದರೂ ಇರೋಕ್ಕೆ ಸಾಧ್ಯವಾಗಿದೆಯಾ? "

"ನೀ ಪ್ರೋಪೋಸ್ ಮಾಡ್ತೀಡೀಯಾ?" ಅಂತ ನಾನು ಕೇಳಿದೆ

"ಇಲ್ಲ ಕಣೆ, ನಾಳೆ ನಮ್ಮ ಆಫೀಸಿನಲ್ಲ್ಲಿ ಭಾಷಣ ಇದೆ. ಅದಕ್ಕೆ ಪ್ರಾಕ್ಟೀಸ್ ಮಾಡ್ತೀದೀನಿ." ಅಂದವನಿಗೆ ಸಿಟ್ಟು ನೆತ್ತಿಗೇರಿತ್ತು.

ಆದರೆ ನನ್ನ ಬದುಕಿನ ದಾರಿಯೇ ಬೇರೆಯಲ್ಲವ? ನಾನು ಇವನನ್ನ ಮದುವೆಯಾದರೆ ಅತ್ಯದ್ಭುತ ದಂಪತಿಗಳು ಅನ್ನಿಸಿಕೊಳ್ಳಬಹುದು. ಇವನು ನನ್ನಲ್ಲಿ ಮುಳುಗಬಹುದು, ನಾನು ಇವನ ಬೆಚ್ಚನೆಯ ಆಸರೆಯಲ್ಲಿ ತೇಲಬಹುದು..ಆದರೆ ನನಗೆ ಬೇಕಾಗಿರೋದು ಏನು? ಎಲ್ಲ ಹುಡುಗಿಯರಂತೆ ಮದುವೆಯಾಗಿಬಿಡೋದ? ಛೇ ಎಲ್ಲರನ್ನು ಯಾಕೆ ತರಲಿ ! ಹೋಲಿಕೆಗಳನ್ನು ಮಾಡಿಕೊಳ್ಳಬಾರದು. ನಾನೇ ಹೆಚ್ಚು ಎಲ್ಲರಿಗಿಂತ ಅನ್ನೋ ಅಹಂಕಾರ ಬರುತ್ತೆ.. ಆದರೆ ನನಗೆ ಬೇಕಾಗಿರೋದೇನು? ಗೊತ್ತಾಗುತ್ತಿಲ್ಲ.. ಮದುವೆಯಂತೂ ಬೇಡ ಅನ್ನಿಸುತ್ತಿದೆ.. ಆದರೆ ಇದನ್ನು ಅವನಿಗೆ ವಿವರಿಸಲಾಗಲಿಲ್ಲ.

'ಇಲ್ಲ ನನಗೆ ಮದುವೆ ಬೇಡ' ಅಂದೆ. ಅವನೂ ಒಳಗೊಳಗೆ ಕುದ್ದು ಹೋಗುತ್ತಿರುವುದು ಗೊತ್ತಾಗುತ್ತಿತ್ತು . ಅರ್ಧ ಗಂಟೇ ಏನೂ ಮಾತಾಡಾದೇ "ನಿನಗೆ ಅಹಂಕಾರ!" ಎಂದಷ್ಟೇ ಹೇಳಿ ಎದ್ದು ಹೋದ. ನನಗೆ ಅಹಂಕಾರವೇ?
ಕೇಳಿಕೊಳ್ಳುತ್ತಿದ್ದೇನೆ ಪ್ಲೇಯರ್‌ನಲ್ಲಿ - ಕಾಣದಾ ಕಡಲಿಗೇ ಹಂಬಲಿಸಿದೇ ಮನಾ... ಅಂತ ಅಶ್ವಥ್ ರು ಹಾಡುತ್ತಿದ್ದಾರೆ.....

Tuesday, June 5, 2007

ಗಾಡಿ- ಪತ್ರ- ಮೊಬೈಲು..

ಕಾಲೇಜಿನಲ್ಲಿ ಎಂತದ್ದೋ ಕಾನ್ಫರೆನ್ಸು ನಮಗೆಲ್ಲ ಒಂದು ವಾರ ರಜೆ. ಮನೆಗೆ ಬಂದೆ . ಊಟ- ಮಾತು ಆದ ಮೇಲೆ ಅಪ್ಪ ಏನೇನು ಹೊಸದು ತಂದಿದ್ದಾರೆ ಅಂತ ಚೆಕಿಂಗ್ ಮಾಡಿದೆ. ಬಂದ ರಿಸಲ್ಟು ನಾಲ್ಕು ಸೀಡಿ, ಎರಡು ಪುಸ್ತಕ...

ಮೂರು ಸೀಡಿಗಳು ಶಾಸ್ತ್ರೀಯ ಸಂಗೀತದ್ದು. ನಾಲ್ಕನೆಯದು ಅಶ್ವಥರ ಸಂಗೀತದಲ್ಲಿ, ಕೆ.ಎಸ್.ನ ಅವರ ಮೈಸೂರು ಮಲ್ಲಿಗೆ! ನನಗೆ ಕುಣಿಯೋಷ್ಟು ಖುಷಿ.

ಬಳೆಗಾರ ಚೆನ್ನಯ್ಯ ಬಂದು, "ನವಿಲೂರ ಮನೆಯಿಂದ ನುಡಿಯೊಂದ ತಂದಿಹೆನು" ಅಂತ ಶುರು ಮಾಡಿ "ಹೋಗಿ ಬನ್ನಿರಿ ಒಮ್ಮೆ ಕೈಮುಗಿದು ಬೇಡುವೆನು ಅಮ್ಮನಿಗೆ ನಿಮ್ಮದೇ ಕನಸು" ಎಂದು ಮುಗಿಸುವಾಗ ನನಗೇ ದುಃಖ ಮಡುವುಗಟ್ಟಿತ್ತು. ರಾಯರಂತು ಹೆಂಡತಿಯನ್ನ ನೋಡೋಕೆ ತಕ್ಷಣ ಹೊರಟಿರಬೇಕು..


ತವರು ಮನೆಯ ಸುದ್ದಿ ತಿಳೀಯೋಕೆ ಕಾತುರಳಾಗಿರುವ ಮಗಳು .. ಮಗಳು ಮೊಮ್ಮೊಕ್ಕಳ ವಿಷಯವನ್ನ ಕೇಳೋಕೆ ಚಾತಕ ಪಕ್ಷಿಗಳಂತೆ ಕಾಯುತ್ತಿರುವ ತಂದೆ ತಾಯಿ ..ಮದುವೆಯಾಗಿ ಬೇರೆ ಬೇರೆ ಊರು ಸೇರಿರುವ ಅಕ್ಕತಂಗಿಯರು, ಒಡಹುಟ್ಟಿದವರ ವಿಷಯವನ್ನ ತಿಳಿಯೋಕೆ ಪಡುವ ಧಾವಂತಗಳು... ದೂರದ ಊರಲ್ಲಿ ಓದುತ್ತಿರುವ ಮಗನ ಬಗ್ಗೆ ಚಿಂತಿಸುವ ಅಮ್ಮ, ಇವರಿಗೆಲ್ಲ ಆಗ - ಅಂದರೆ ತುಂಬಾ ಹಿಂದೆ ಊರಿಂದ ಊರಿಗೆ ಸುತ್ತಾಡುತ್ತಿದ್ದ ಈ ಬಳೆಗಾರರು ಅಥವ ಊರಿಗೆ ಯಾವುದೋ ಕೆಲಸದ ಮೇಲೆ ಬಂದಿರುವ ಆ ಊರಿನ ಜನ ಅಥವ ಆಳುಗಳು ಇವರುಗಳೇ ಸಂದೇಶವಾಹಕರು... messengers.

ಇವರುಗಳ ಬರವನ್ನ ಜನ ಹೇಗೆ ಚಾತಕ ಪಕ್ಷಿಯಂತೆ ಕಾಯುತ್ತಿರಬಹುದು ಅಂತ ಕಲ್ಪಿಸಿಕೊಂಡು, ನಾನೇ ಕಾಯುತ್ತಿರುವ ಹಾಗೆ ಅನ್ನಿಸಿ ರೋಮಾಂಚನವಾಗುತ್ತದೆ.. ಕಲ್ಪನೆಯೇ ಇಷ್ಟು ರೋಮಾಂಚನಗೊಳಿಸಿದರೆ ನಿಜವಾದ ಅನುಭವ ಹೇಗಿರಬಹುದು?

ಈಮೇಲ್ ಮೊಬೈಲ್ ಯುಗದವರಾದ ನಮಗೆ ಸಂದೇಶವಾಹಕರ ಬಗ್ಗೆ, ಗಾಡಿ ಪ್ರಯಾಣಗಳ (ಎತ್ತಿನ ಗಾಡಿ) ಬಗ್ಗೆ ಒಂದು ಕಲ್ಪನೆ ಹುಟ್ಟಿದರೆ ಅದಕ್ಕೆ ಕೆ.ಎಸ್.ನ ಅವರ ಕವಿತೆ, ಕುವೆಂಪು, ಬೈರಪ್ಪ, ಅನಂತಮೂರ್ತಿಯವರ ಕಾದಂಬರಿಗಳೇ ಕಾರಣ.. ನಮ್ಮ ಅಪ್ಪ ಅಮ್ಮಂದಿರೆ ಈ ಮೆಸ್ಸೆಂಜರ್ಸ್ನ ನೋಡಿಲ್ಲ. ಅವರದು ಪತ್ರಗಳು , ಟ್ರಂಕ್ ಕಾಲ್ ಗಳ ಕಾಲ...

ಪತ್ರಗಳು ಪರ್ವಾಗಿಲ್ಲ , ಅವು ಒಂಥರ exitementಏ! ನಮ್ಮಗಳಿಗೆ ಆ exitemenಟು ಇಲ್ಲ. ಹೋಗ್ಲಿ ನಾನು ಪತ್ರ ಬರೆದರೆ ನನಗೆ ಉತ್ತರ ಆದ್ರೂ ಬರೀಬೇಕಲ್ಲ ಅನ್ನಿಸಿ ಮೂರು ಜನ ಸ್ನೇಹಿತರಿಗೆ ಪತ್ರ ಬರೆದೆ. ಮೂರು ಜನಾನು ಫೋನ್ ಮಾಡಿ ನಿನ್ನ ಲೇಟರ್ ಸಿಕ್ಕಿತು ಅಂದ್ರು. ಒಬ್ಬಳು "ಸಕತ್ತಾಗಿ ಬರೀತಿಯ ಕಣೆ" ಅಂದ್ರೆ ಇನ್ನೊಬ್ಬ "ಏನು ಸೆಂಟಿಯಾಗಿ ಬರ್ದಿದೀಯಾ.. ಸ್ಕೂಲ್ ಡೇಯ್ಸ್ ನೆನಪು ಬಂತು" ಅಂದ!. ಮತ್ತೊಬ್ಬಳು "ಇದೇನೇ ಹೊಸಾ ಹುಚ್ಚು" ಅಂದಳು... ನನಗೆ ಒಂದಲ್ಲ ಒಂದು ಹುಚ್ಚು ಹಿಡಿದಿರುತ್ತೆ ಅನ್ನೋ ಇವರನ್ನೆಲ್ಲ ಕುಟ್ಟಿ ಹಾಕಬೇಕು ಅನ್ನಿಸಿತ್ತು.


ಭೈರಪ್ಪನವರ 'ಸಾರ್ಥ' ಓದಿದಾಗ, ಅಲ್ಲ ಅದಕ್ಕಿಂತ ಮೊದಲು ಡಾ.ಪಿ ವಿ ನಾರಾಯಣ್ ಅವರ 'ಅಂತರ' ಓದಿದಾಗ ಗಾಡಿ ಪ್ರಯಾಣದ ಕಲ್ಪನೆ ಬಂದಿತ್ತು ನನಗೆ.

ನೀನು ಗಾಡೀಲಿ ಪ್ರಯಾಣ ಮಾಡಿದೀಯಾ? ಅಂತ ಸೌತೇಕಾಯಿ ಹೆಚ್ಚುತ್ತಿದ್ದ ಅಮ್ಮನನ್ನು ಕೇಳಿದಾಗ
"ಹೂಂ, ದಯಣ್ಣನ ಉಪನಯನಕ್ಕೆ ಗಾಡೀಲೇ ಹೋಗಿದ್ದು, ರಾತ್ರಿ ಹೊತ್ತಿನ ಪ್ರಯಾಣ ನಾಲ್ಕು ಗಾಡಿ. ಆಗ ನಾವೆಲ್ಲ ತುಂಬಾ ಚಿಕ್ಕವರು"

ಮಧ್ಯದಲ್ಲಿ ನನ್ನ ತಂಗಿಯ ಪ್ರಶ್ನೆ "ನೀನು, ಮಾಮಾ, ದೊಡ್ಡಮ್ಮ, ಚಿಕ್ಕಮ್ಮ ಎಲ್ಲ ಒಟ್ಟಿಗೆ ಕೂತಿದ್ರ?"

"ಹಾಗೆಲ್ಲಾ ಚಿಕ್ಕ ಚಿಕ್ಕವರನ್ನು ಒಂದೇ ಗಾಡೀಲಿ ಕೂರಿಸುತ್ತಾರ?" ಮತ್ತೆ ಅಮ್ಮನ ವರ್ಣನೆ..
"ನಿಮ್ಮಜ್ಜಿ, ಚಿಕ್ಕಜ್ಜಿ, ನನ್ನ ಸೋದರತ್ತೆ ಏನೇನೋ ಮಾತಾಡ್ತಿದ್ರು. ಅಕ್ಕ ಪಕ್ಕಾ ಸಾಲು ಸಾಲು ಮರಗಳು, ಗವ್ ಅನ್ನುವ ಕತ್ತಲು, ಗಾಡಿ ಹೊಡಿಯೋ ಭೈರ ಹಾಡು ಹೇಳುತ್ತಿದ್ದ ಸಣ್ಣ ದನಿಯಲ್ಲಿ...." ಅಂತ ಅವರ ಒಂದು ರಾತ್ರಿಯ ಗಾಡಿ ಪ್ರಯಾಣದ ಬಗ್ಗೆ ಹೇಳಿ ಮುಗಿಸೋ ಹೊತ್ತಿಗೆ ಸೌತೆ ಕಾಯಿ ಪೂರಾ ಹೆಚ್ಚಿ ಸಾಂಬಾರೂ ಮಾಡಾಗಿತ್ತು.

ನಮ್ಮಮ್ಮ ಒಂದು ರಾತ್ರಿ ಗಾಡಿ ಪ್ರಯಾಣ ಮಾಡಿದರೆ, ನಾನೂ ಮಾಡಿದೀನಿ ,ಅರ್ಧ ಗಂಟೆಯ ಪ್ರಯಾಣ ನಮ್ಮ ಸೋದರತ್ತೆಯ ಮನೆಯಲ್ಲಿ ! ಎಂತದೋ ಫಂಕ್ಷನ್ನು.. ಅವರದು ತೀರಾ ಒಳಗಡೆ ಹಳ್ಳಿ - ಒಂದು ಆಟೋ ಇರಲಿಲ್ಲ. ಆಗ ಅತ್ತಂಬಿ (ಅತ್ತೆಯ ಗಂಡ) ಎತ್ತಿನ ಗಾಡಿ ಕಳಿಸಿದ್ರು. ನನ್ನ ಆ ಗಾಡಿ ಹೊಡೀಯೋನು ಎತ್ತಿ ಸೀದಾ ಗಾಡಿಯೊಳಗೆ ಕೂರಿಸಿದ್ದಷ್ಟೇ ಜ್ಞಾಪಕ. ಅದರಿಂದ ಇಳಿದಿದ್ದು ನೆನಪಿಲ್ಲ .. ಆಗ ನಾಲ್ಕು ವರ್ಷದವಳಿರಬೇಕು ನಾನು.

ಈಗಂತು ಈ ಅನುಭವಗಳು ಆಗೊಕೆ ಸಾಧ್ಯಾನೆ ಇಲ್ಲ.. ಮೆಸ್ಸೆಂಜರ್ಸ್ ಇಲ್ಲ, ಪತ್ರಗಳಂತೂ ಪಿತೃಗಳಿಗೇ ಅರ್ಪಿತವಾಗಿವೆ.. ಗಾಡಿಪ್ರಯಾಣ outdatedಉ. ಈಗಿನವರಿಗೆ ಕಾಯುವ ಗೋಜೇ ಇಲ್ಲ .ಒಬ್ಬರೊಬ್ಬರ ಬಗ್ಗೆ ತಿಳಿದುಕೊಳ್ಳಲು ಪೋನ್ ಇದೆ, ಮೊಬೈಲ್ ಇದೆ. ಅಕ್ಕ ಪಕ್ಕದಲ್ಲಿ ಕೂತು ಮಾತಾಡ್ತಿರೋ ಹಂಗೆ ಕಾಡು ಹರಟೆ ಹೊಡೀಬಹುದು...


ಇನ್ನು ಈ ಮೊಬೈಲು ಕಾತುರತೆಯನ್ನ ಕಸದ ಬುಟ್ಟಿಗೆ ಸೇರಿಸಿದೆ . ಉದಾಹರಣೆಗೆ ನನ್ನ ಸ್ನೇಹಿತೆ ವಿಷಯ ಹೇಳ್ತೀನಿ - ಅವಳು ಅವರ ಊರಿಂದ ಹಾಸ್ಟೆಲಿಗೆ ಬರೋದು ಅವರ ಅಪ್ಪ ಅಮ್ಮನಿಗೆ live telecast ತರ..ಬಸ್ಸು ಹತ್ತುವಾಗ ಸೀಟು ಸಿಕ್ಕಿದಾಗ, ಒಂದು ಕಾಲ್. ಬಸ್ಸಿಂದ ಇಳಿದು ಟ್ರೇನ್ ಗೆ ಟಿಕೆಟ್ ತಗೊಂಡಾಗ ಇನ್ನೊಂದು. ಟ್ರೇನ್ ಮಧ್ಯದಲ್ಲಿ ನಿಂತು ಬೋರಾದಾಗ , ಹಾಸ್ಟೆಲ್ ಸೇರಿದಾಗ - ಹೀಗೆ ಪ್ರತಿ ಸಲ ಕಾಲು, ಮಾತು ಮಾತು ಮಾತು...ಎಷ್ಟು ವಿಚಿತ್ರ ಅಲ್ಲವ?


ನನ್ನ ರೂಮ್ ಮೇಟ್ ಹಳ್ಳಿಯವಳು . ನನಗಿಂತ ಅವಳಿಗೆ ಹಳ್ಳಿಯ ಹಿಂದಿನ ಕಾಲದ ಕಲ್ಪನೆ ಜಾಸ್ತಿ ಇದೆ. ಅವಳಿಗೆ ಇದನ್ನೆಲ್ಲ ಹೇಳಿದ್ರೆ, ಅವಳು ಇನ್ನು ಏನೇನೋ ಹತ್ತು ಹನ್ನೆರಡು ಕಂಪ್ಯಾರಿಸನ್ ಮಾಡಿ, ನಮಗೆಲ್ಲ ಆ ಅನುಭವಗಳು ಇಲ್ವಲ್ಲ ಅಂತ ನಾನು ಹೊಟ್ಟೆ ಉರ್ಕೋಳ್ಳೋದನ್ನ ನೋಡಿ.. "ನೀನು ಈ ಕಾಲದಲ್ಲಿ ತಪ್ಪಿ ಹುಟ್ಟಿದ್ದಿಯ ಇನ್ನೂರು ಮುನ್ನೂರು ವರ್ಷಗಳ ಹಿಂದೆ ಹುಟ್ಟಬೇಕಿತ್ತು "ಅಂತ ಗೇಲಿ ಮಾಡಿದಳು .. ನಾನು "ನಾನು ಅವಾಗ ಕೂಡ ಇದ್ದೆ ಇದು ನನ್ನ ಇನ್ನೊಂದು ಜನ್ಮ ಅಂತ ..ನಾನು ಹೇಳೋದು ನಿಜ ಇರಬಹುದು ಅಲ್ಲವ??" ಅಂದರೆ,

"ಇಲ್ಲ ಕಣೆ ಸಕತ್ ಸುಳ್ಳು... ನಿಂದು ಇದೆ ಲಾಸ್ಟ್ ಜನ್ಮ ಇದೆ ಮೊದಲ ಜನ್ಮ...ಹೆಹೆಹೆಹೆ" ಅಂತ ನಕ್ಕಳು ಅವಳು.

Monday, June 4, 2007

ಬೆಳ್ಳಿಯ ಭಾವನೆ

ಕಾಡು ಕುದುರೆಯ ಆವೇಗವೇ,

ಈಗಷ್ಟೇ ನೀನು ಎದ್ದು ಹೋದೆ. ಮೃದು ಹಾಸಿಗೆಯ ಮೇಲೆ ಮಲಗಿರುವ ನೀಲಿ ಬಣ್ಣದ ಹೂಗಳಿರುವ ಆ ಮೇಲು ಹಾಸಿನ ಮುದುರುಗಳಲ್ಲಿ ನಿನ್ನ ಘಮ.ಬೆಳಗಿನ ನಾಲ್ಕು ಘಂಟೆಗೆ ನೀನು ನನ್ನ ಮಳೆಯಾಗಿ ಸೇರುತ್ತಿದ್ದರೆ ಮೊದಲ ಮಳೆಗೆ ಘಂ ಎನ್ನುವ ಭುವಿಯಂತೆ ನಾನು ಕರಗುತ್ತಿದ್ದೆ.

ನೀನು ಮುಗಿಲು ನಾನು ನೆಲ

ನಾನು ಎಳೆವೆ ನೀನು ಮಣಿವೆ
ನಾನು ಕರೆವೆ ನೀನು ಸುರಿವೆ

ನಾ ಅಚಲದ ತುಟಿ ಎತ್ತುವೆ
ನೀ ಮಳೆಯೊಳು ಮುತ್ತನಿಡುವೆ


ಹೊದಿಕೆಯೋ ಎಂಬಂತೆ ಸುಮ್ಮನೇ ನಿನ್ನ ಮೇಲಿದ್ದವಳಿಗೆ ಕರೆಗಂಟೆಯ ಸದ್ದು ಇಷ್ಟವಾಗಲಿಲ್ಲ. ಆದರೂ ಇಷ್ಟು ಮುಂಜಾನೆ ಬಾಗಿಲು ಬಡಿಯುತ್ತಿದ್ದಾರೆಂದರೆ ಯಾವುದೋ ಸೀರಿಯಸ್ ಕೇಸೇ ಬಂದಿರಬೇಕೆಂದು ಓಲ್ಲದ ಮನಸ್ಸಿನಿದ ಬಾಗಿಲು ತೆರೆದರೆ ಕಂಡಿದ್ದು ಕೆಂಡದಂತೆ ಮೈ ಸುಡುತ್ತಿರುವ 8ವರ್ಷದ ಹುಡುಗಿಯ ಜೊತೆ ಚಿಂತೆಗಣ್ಣಿನ ಅವರಪ್ಪ.ನನಗೆ ಗೊತ್ತು ನೀನು ಜಾಣ ಹುಡುಗ ಆ ಹುಡುಗಿಗೆ ಬೇಗ ವಾಸಿಯಾಗುತ್ತೆ.


ಬೆಳಗಿನ ಆ ಚಳಿಯಲ್ಲಿ ಮಗುವಿನ ಜೊತೆ ಬಂದ ತಂದೆಗೆ ಕಾಫಿಯ ಅವಶ್ಯಕತೆ ಇದೆ ಅನ್ನಿಸಿ ಹಬೆಯಾಡುವ ಕಾಫಿ ತಂದಿಟ್ಟಾಗ ನಿನ್ನ ಕಣ್ಣುಗಳಲ್ಲಿ ನನ್ನೆಡೆಗಿದ್ದ ಮೆಚ್ಚುಗೆ ನೋಡಿ ಹಿತವಾಯಿತು ಮನಸಿಗೆ.
ನಮ್ಮಿಬ್ಬರದು ಅರೆಂಜ್ ಮ್ಯಾರೇಜ್ ಅಂದರೆ ಯಾರು ನಂಬುವುದಿಲ್ಲ...ಏನೆಂದು ಕರೆಯಲಿ ನಿನ್ನ??ಗಂಡ? ಗೆಳೆಯ? ಆತ್ಮಸಖ??
ಆಸ್ಪತ್ರೆ ವಾಸನೆ ಅಂದರೆ ವಾಕರಿಸುತ್ತಿದ್ದ ನಾನು ದಿನಾ ಅದೇ ವಾಸನೆಯನ್ನು ಹೊತ್ತು ತರುವ ವೈದ್ಯನನ್ನು ಮದುವೆಯಾದದ್ದು ಹೇಗೆ??ಇದಕ್ಕೆ ಋಣಾನು ಬಂಧ ಎನ್ನುವುದ??


ಈಗ ನೀನು ಮಹಡಿ ಮೇಲಿನ ಕೊಣೆಯ ಆರಾಮು ಖುರ್ಚಿಯ ಮೇಲೆ ಕುಳಿತುಕೊಂಡು ಯಾವುದೋ medical journal ಓದುತ್ತಿರುತ್ತೀಯ. ಹಾಗೆ ನೀನು ಓದುವುದನ್ನು ದೂರದಿಂದ ನಿನಗೆ ಗೊತ್ತಾಗದ ಹಾಗೆ ನೋಡುವುದು ನನಗೆ ತುಂಬಾ ಖುಷಿ ಕೊಡುತ್ತೆ.

ಸ್ನಾನ ಮಾಡಿ ಬಾ ಹುಡುಗ, ನಿನಗಿಷ್ಟವಾದ ದೋಸೆ ತಿನ್ನುತ್ತಾ ಈ ಪತ್ರ ಓದುವೆಯಂತೆ. ನಿನ್ನನ್ನು ಆಸ್ಪತ್ರೆಗೆ ಕಳುಹಿಸಿ ನಾನು ಬ್ಯಾಂಕಿನ ಕೆಲಸಕ್ಕೆ ಹೊರಡುವೆ. ಸಂಜೆ ಬೇಗ ಬಾ ಕಲಾಕ್ಷೇತ್ರದಲ್ಲಿ ಅಶ್ವತರ ಸಂಗೀತವಂತೆ. ಹೋಗೋಣ..ಅವರ ಭಾವ ಲೀಲೆಯಲ್ಲಿ ಮಿಂದುಬರೋಣ.

...................................................ನಿನ್ನ ಬೆಳ್ಳಿ


(ಇದನ್ನು ಓ ಮನಸೇ communityಲಿ ಪೋಸ್ಟ್ ಮಾಡಿದ್ದೆ ಇಲ್ಲೂ ಇರಲಿ ಎಂದು ಹಾಕಿರುವೆ )

Friday, June 1, 2007

ಮುಟ್ಟಾದ ಹುಡುಗಿ!

ಅವತ್ತು ಸಂಜೆ ಅವಳ ಓದ್‌ಕೊಳೋ ಕೋಣೆಯಿಂದ ವಾರೆಂಡಾದವರೆಗೂ ಬಂದಿದಾಳೆ "ಅಮ್ಮ.. ಹೊಟ್ಟೆಲಿ ಒಂಥರ ನೋವು- ಸಂಕಟ, ತಲೆನೋವು ಅಳು ಬರ್ತಿದೆ." ಅಂದಳು. ಅವಳ ಅಮ್ಮ "ಏನಾಯ್ತೆ ಕಂದ" ಅಂತ ಹುಡುಗಿ ಹತ್ರ ಹೋಗಿ ನೋಡಿದ್ರೆ ಒಂದು ತೊಟ್ಟು ರಕ್ತ ನೆಲಕ್ಕೆ ಬಿತ್ತು.ಸರಿಯಾಗಿ ಗಮನಿಸಿದಾಗ ರೂಮಿನಿಂದ ವರೆ0ಡಗೆ ಬರೋ ದಾರಿಯಲ್ಲಿ ಒಂದೊಂದು ತೊಟ್ಟು ರಕ್ತ ಬಿದ್ದಿದೆ ಅವಳು ಮೈ ನೆರೆದಿದಾಳೆ her body is matured.

'ಅಯ್ಯೂ.. ಇಷ್ಟು ಬೇಗ ಆಗ್‌ಬಿಟ್ಲಲ್ಲ' ಅಂತ ತಾಯಿಗೆ ಹಿಂಸೆ ಆದ್ರೂ ತೋರಿಸಿಕೊಳ್ಳದೇ ತಮ್ಮ ಮಲಗೋ ಕೋಣೆಯಲ್ಲಿ ಯಾವುದೋ ಪುಸ್ತಕದಲ್ಲಿ ಮುಳುಗಿದ್ದ ಗಂಡನಿಗೆ ವಿಷಯ ತಿಳಿಸಿ, ಅವರ ಅಮ್ಮನಿಗೆ ಫೋನ್ ಮಾಡಿದಳು. ಮೊಮ್ಮಗಳು ಮೈನೇರೆದಳು ಅಂತ ತಿಳಿಸೋಣ ಅಂತಾನೂ? ಅಥವಾ ಅವಳಿಗೆ ಇನ್ನೂ ಮುಂದೆ ಏನು ಆರೈಕೆ ಮಾಡೋಣ ಅಂತ ಕೆಳೊಕ್ಕೋ? ಅಥವಾ ಎರಡಕ್ಕೂ?

ಹೀಗೆ ಒಂದಲ್ಲ ಒಂದು ರೀತಿಲಿ ಹುಡುಗೀರು ಮೈ ನೆರೆದಿರೋದು ಅವರ ಮನೆಯೋರಿಗೆ ಗೊತ್ತಾಗುತ್ತೆ.ಕೆಲವರಿಗೆ ಅವರ ತಾಯಿನೋ, ಇನ್ಯಾರೋ ಮೊದಲೇ 'ಹುಡುಗಿ ವಯಸ್ಸಿಗೆ ಬಂದಿದಾಳೇ' ಅನ್ನಿಸಿದಾಗ ಇದರ ಬಗ್ಗೆ ಸೂಚ್ಯವಾಗಿ ತಿಳಿಸಿರುತ್ತಾರೆ. ಇನ್ನೂ ಕೆಲವು ಹುಡುಗೀರಿಗೆ ಅದೂ ಲಭ್ಯವಿಲ್ಲ.

ಮುಟ್ಟಾಗೋಕೆ ಮುಂಚೆ ತಿಳಿಸಬೇಕೋ ಬೇಡವೋ? ಮುಟ್ಟಾದಮೇಲೆ ಅವರಿಗೆ ಆರತಿ ಮಾಡಬೇಕಾ? ಆರೈಕೆ ಮಾಡಬೇಕಾ? ಇದರ ಬಗ್ಗೆ ನಾನು ಮಾತಾಡ್ತಾ ಇಲ್ಲ! ನಾನು ಹೇಳ್ತೀರೂದೇ ಬೇರೆ.

ನನ್ನ ಸ್ನೇಹಿತೆ ಒಬ್ಬಳು ಮೈನೆರೆದಾಗ "ಜೀವನದಲ್ಲಿ ಒಂದೇ ಸತಿ ಹೀಗೆ ಆಗೋದು ಹಾಳಾಗ್ ಹೋಗ್ಲಿ" ಅಂತ ಅಂದುಕೊಂಡಿದ್ದಳಂತೆ. ಮುಂದಿನ ತಿಂಗಳು ಮತ್ತೆ ಆದಾಗ ಅವಳಿಗೆ ಆಘಾತ, ನಿರಾಶೆ, ದು:ಖ. ಮೊದಲನೆದಾಗಿ ನಾವು ಫಿಸಿಕಲ್ ಹಿಂಸೇಗಳಾದ ರಕ್ತ ಸ್ರಾವ, ತಲೆನೋವು, ಹೊಟ್ಟೆನೋವು, ಬೆನ್ನುನೋವು, ಕೈ ಕಾಲು ಬಿದ್ದುಹೋದಹಾಗೆ ಅನ್ನಿಸುವುದು(ಒಬ್ಬೊಬ್ಬರಿಗೆ ಒಂದೊಂದು ರೀತಿ )ಇವುಗಳನ್ನ ಮೊದಲನೆ ಸಾರಿ ಅನುಭವಿಸುತಿರ್ತಿವಿ.
ಇದರ ಜೊತೆಗೆ ಅಮ್ಮಂದಿರ ಆರೈಕೆ ಮೊದಲು ಚಿಗಲಿ ಉಂಡೆ, ಒಂದೆರೆಡು ತಿಂಗಳು ಆದ ಮೇಲೆ ಕೊಬ್ಬರಿ ಬೆಲ್ಲ, ಅದಾದ ಒಂದು ತಿಂಗಳಿಗೆ ಸಜ್ಜಿಗೆ,ಮೇಂತೆ ಮುದ್ದೇ.. ಇವೆಲ್ಲವನ್ನು ಹಾಗೆ ಕೊಡ್ತಾರೆ ಅಂದುಕೋಬೆಡಿ ಪ್ರತಿಯೊಂದನ್ನು ತುಪ್ಪದಲ್ಲಿ ಮುಳುಗಿಸಿ ಕೊಟ್ಟಿರುತ್ತಾರೆ. ತುಪ್ಪದ ಹೊಳೇಲಿ ಚಿಗಲಿ ಉಂಡೆ, ಕೊಬ್ಬಾರಿ ಬೆಲ್ಲದ ಉಂಡೆ ತೇಲುತ್ತಿರುತ್ತದೆ.ಊಹಿಸಿಕೊಳ್ಳಿ ತುಪ್ಪ ಅಂದರೆ ಅಲರ್ಜಿ ಆಗಿಹೋಗುತ್ತೆ.ಇವನೆಲ್ಲಾ ನೋಡಿದರೆ ಓಡಿಹೋಗೋಣ ಅನ್ನೋಷ್ಟು ಅಸಹ್ಯ, ಹಿಂಸೆ ಆಗುತ್ತಿರುತ್ತೆ,ಕಣ್ಣಲ್ಲಿ ನೀರು.. ಆದರೆ ಅಮ್ಮಂದಿರು ಇದ್ಯಾವುದಕ್ಕೂ ಕ್ಯಾ ರೇ ಅನ್ನುವುದಿಲ್ಲ.
ತಣ್ಣೀರು ಮುಟ್ಟೋಹಂಗೆ ಇಲ್ಲ, ಕುಡಿಯೋಹಂಗೆ ಇಲ್ಲ! ಸುಡು ಬೇಸಿಗೆಲೂ ಶಾಲೆಗೆ ಸ್ವೇಟೆರ್ ಹಾಕಿಕೊಂಡು ಹೂಗಬೇಕು ಯಾರಾದರೂ ಸ್ನೇಹಿತೆಯರು ಯಾಕೆ ಸ್ವೇಟರ್ ಅಂತ ಕೇಳಿದರೆ ಹುಷರಿಲ್ಲ ಅಂತ ಸುಳ್ಳು ಹೇಳಬೇಕು..

ಮುಟ್ಟಾದಾಗ ಹುಡುಗೀರು ತಾವು ಮುಟ್ಟಾಗಿರೋದು ಯಾರಿಗೂ ಗೊತ್ತಾಗಬಾರದು ಅನ್ಕೊಂಡಿರ್ತಾರೆ ಹುಡುಗೀರು ಕಷ್ಟಪಟ್ಟು ಶಾಲೆಲಿ ಹೊರಗಡೆ ಯಾರಿಗೂ ಗೊತ್ತಾಗದ ಹಾಗೆ ಗುಟ್ಟು ಕಾಪಾಡಿಕೊಂಡಿದ್ರೆ, ಮನೇಲಿ ಅವರ ಅಮ್ಮ ತನ್ನ ಎಲ್ಲ ಸಂಭಂಧಿಕರಿಗೂ ಸ್ನೇಹಿತೆಯರಿಗೂ ಆರಾಮಾಗಿ ಒಂದು ಚೂರು ಗುಟ್ಟು ಮಾಡದೇ ಹೇಳುತ್ತಿರುತ್ತಾರೆ.. ಆಗ ಆ ಹುಡುಗಿ ಎಷ್ಟು irritate ಆಗ್ತಾಳೆ! 'ದೇವರೇ! ನಂಗೆ ಯಾಕೆ ಇಷ್ಟೆಲ್ಲಾ ಕಷ್ಟ ಕೊಡ್ತೀಯಾ? ಈ ಅಮ್ಮಂಗೆ ಸ್ವಲ್ಪ ಬುದ್ದಿ ಕೊಡಪ್ಪಾ..' ಅಂತ ಮೊರೆ ಇಡ್ತಾಳೆ..

ಈಗ ಅದೆಲ್ಲ ನನಪಿಸಿಕೊಂಡರೆ ಎಷ್ಟೊಂದು ಸಾಮಾನ್ಯ ವಿಷಯ ಅನ್ಸುತ್ತೆ. ಮುಟ್ಟಾಗೋ ದು ತಿಂಗಳಿಗೊಂದು ಸತಿ ಅನುಭವಿಸಬೇಕಾದ ಖರ್ಮ! ಅಂತ ಗೊತ್ತಾಗೋಗಿದೆ. ಆದರೆ ಪ್ರತಿಯೊಬ್ಬ ಹುಡುಗಿಯ ಮನಸಿನ ಡೈರಿಯಲ್ಲಿ ಮೊದಲ ಸಲ ಮುಟ್ಟಾದಾಗ ಉಂಟಾದ ಭಾವನೆಗಳು, ಒಂದು ಅಳಿಸಲಾಗದ ಹಾಳೆ - ಮರೆಯಲಾಗದ ನೆನಪು!