Friday, March 28, 2008

ನಿಜದ ನೆರಳಿನ ನೆಲೆ

ಅನಂತಮೂರ್ತಿಗೆ ತಾನು ಚಿತ್ರಕಾರನೋ ಕವಿಯೋ ಲೇಖಕನೋ ಆಗಬೇಕಿತ್ತೆಂದು ಬಹಳ ಸಲ ಅನ್ನಿಸಿದ್ದುಂಟು. ಏಕೆಂದರೆ ಅವನೇ ಹೇಳುವಂತೆ ಉದಾಹರಣೆಗೆ ನಿಮಗೆ ಟ್ರೈನ್ ಪದ ಕೇಳಿದ ತಕ್ಷಣ ಏನನ್ನಿಸುತ್ತೆ? ಉದ್ದದ ಟ್ರೇನು, ಅದರ ಚುಕುಬುಕು ಶಬ್ದ ಅಥವ ಹೆಚ್ಚಂದರೆ ಅದರ ಬಣ್ಣ ಇಲ್ಲವೇ ನೀವು ಟ್ರೇನಿಗಾಗಿ ಕಾದೂ ಕಾದೂ ಬೇಸತ್ತ ದಿನ ಜ್ಞಾಪಕಕ್ಕೆ ಬರಬಹುದು . ಆದ್ರೆ ಅನಂತಮೂರ್ತಿಗೆ ಹಾಗಲ್ಲ ಅವನಿಗೆ ಟ್ರೇನೆಂದರೆ ಉದ್ದಕೆ ಓಡುತ್ತಿರುವ ಟ್ರೇನು, ಅದರಲ್ಲಿನ ಸೀಟು ತುಂಬಿ ಸೀಟುಗಳು ಸಾಲದೆ ನಿಂತಿರುವ ಜನ, ಅವರು ಯಾರಾದರೂ ಮುಂದಿನ ಸ್ಟಾಪಿನಲ್ಲಿ ಇಳಿಯುತ್ತಾರ ಎಂದು, ಕೂತಿರುವವರು ಬ್ಯಾಗನ್ನು ಸರಿಸುವುದನ್ನೇ ಗಮನಿಸುತ್ತಾ ಬ್ಯಾಗಿನ ಬಳಿ ಅವರ ಕೈ ಹೋದಾಗ ಖುಶಿ ಪಟ್ಟು ನಿಟ್ಟುಸಿರುಡುವ ಮೊದಲೇ ಆ ಬ್ಯಾಗಿಗೆ ಕೈ ಹಾಕಿದವನು ಅದೊರಳಗಿಂದ ಡಬ್ಬವೊಂದನ್ನು ತೆಗೆದು ಎಂಥದನ್ನೋ ತಿನ್ನಲು ಶುರು ಮಾಡಿದಾಗ ಆಗುವ ನಿರಾಸೆ, ಒಂದು ಹೆಡಿಗೆ ಸಾಮಾನನ್ನು ತೌರುಮನೆಯಿಂದ ತಂದು ಹೊರಟು ಬಂದಿರುವ ಹೆಂಗಸು ಆಗಾಗ ಸಾಮಾನನ್ನು ಲೆಕ್ಕ ಹಾಕುತ್ತಾ, ಅಲ್ಲೆಲ್ಲೋ ಬಾಗಿಲ ಬಳಿ ನಿಂತಿರುವ ದಾಸಯ್ಯನನ್ನು ಮಾತಾಡಿಸುತ್ತಿರುವ ತನ್ನ ತುಂಟ ಮಗನನ್ನು ಕಣ್ಣಲ್ಲೇ ಗದರಿಸುತ್ತಿರುವುದು, ಕಡಲೇ ಕಾಯಿಯೋ, ಪೇರಲೇ ಹಣ್ಣೋ, ಮಂಡಕ್ಕಿಯನ್ನೋ, ಎಂಥದೋ ವಡೆಯನ್ನೋ ಮಾರುವ ಹುಡುಗರು. ಅಲ್ಲೆಲ್ಲೋ ಏ.ಸಿ. ಛೇಂಬರಿನಲ್ಲಿ ಒಳ್ಳೊಳ್ಳೆ ಬಟ್ಟೆಯನ್ನ ಹಾಕಿಕೊಂಡು ಕೈಯಲ್ಲೊಂದು ಇಂಗ್ಲೀಷ್ ಪುಸ್ತಕವನ್ನು ಹಿಡಿದುಕೊಂಡೋ, ಇಯರ್ ಫೋನನ್ನು ಕಿವಿಯಲ್ಲಿ ಸಿಕ್ಕಿಸಿಕೊಂಡೋ ಕೂತಿರುವ ಹುಡುಗರು, ನಿದ್ದೆ ಮಾಡುತ್ತಿರುವ ಗಂಡಸರು, ಮುದ್ದು ಮುದ್ದಾದ ಬೆಳ್ಳಗಿನ ಮಕ್ಕಳು ಅಷ್ಟೇ ಚಂದದ ಅವರ ಅಮ್ಮಂದಿರು.. ಇನ್ನೂ ಏನೇನೋ ಕಲ್ಪನೆ ಬರುತ್ತೆ. ಬರೀ ಟ್ರೇನಿನ ವಿಷಯವಲ್ಲ ಯಾರಿಗಾದರೂ ಒಂದು ಪ್ರಶಸ್ತಿ ಬಂದಿದೆ ಅಂದರೆ ಆ ಪ್ರಶಸ್ತಿಗೆ ಎಷ್ಟು ಜನ ಆಸೆ ಪಟ್ಟಿರಬಹುದು? ಅದು ಸರಿಯಾದವನಿಗೇ ಸಿಕ್ಕಿರಬಹುದಾ..? ಅಲ್ಲಿ ಏನೇನು ರಾಜಕೀಯಗಳು ನೆಡದಿರಬಹುದು? ಪ್ರಶಸ್ತಿಯನ್ನ ಸ್ವಲ್ಪದರಲ್ಲೇ ತಪ್ಪಿಸಿಕೊಂಡವನ ಗೋಳಿನ ಕಥೆಯೇನು? ಎಂದು ಯೋಚಿಸುತ್ತಿರುತ್ತಾನೆ. ಹೀಗೇ ಏನೇನೋ ಸ್ಕೂಲಿನ ಮಕ್ಕಳ ಬಗ್ಗೆ, ಅಲ್ಲೆಲ್ಲೋ ಆದ ಯುದ್ದದಲ್ಲಿ ಹೋರಾಡುತ್ತಿರುವ ಯೋಧನ ಯೋಚನೆಗಳ ಬಗ್ಗೆ, ಇತ್ಯಾದಿ.. ಆದರೆ ಅವನು ವಿದೇಶೀ ಕಂಪನಿಯೊಂದರಲ್ಲಿ ‘ಫಿನಾನ್ಸ್ ಮ್ಯಾನೇಜರ್’ ಆಗಿರೊದ್ರಿಂದ ಬಡ್ಜೆಟ್, ಪ್ರಾಫಿಟ್, ಲಾಸ್, ಫೋರ್ಕಾಸ್ಟ್ ಇತ್ಯಾದಿಗಳಲ್ಲೇ ಮುಳುಗಿ ಹೋಗಿರೊದ್ರಿಂದ ಮತ್ತು ಬರೆಯಲು ಕೂತಾಗಲೆಲ್ಲಾ ಹೇಗೆ ಶುರುಮಾಡಬೇಕು ಎಂದು ತಿಳಿಯದೇ ಹೋಗುವುದರಿಂದ ಸುಮ್ಮನಾಗುತ್ತನೆ.

ಅವನು ಆಫೀಸಿಗೆ ಹೋಗಬೇಕಾದರೆ ದಿನವೂ ಆ ಹಾದಿಯಲ್ಲೇ ಬರುತ್ತನೆ. ಅದೇ ತಿರುವು, ಅದೇ ಹೊಂಡ, ಅದೆ ದಾರಿಯ ಬದಿಯ ಕರಿಬೇವಿನ ಮರ, ಅದೇ ಗಾಡಿಯ ಗೇರನ್ನು ಬದಲಿಸುವ ರೀತಿ, ಕಾರಲ್ಲಿ ಕೂತಾಗಿನಿಂದ ಏನೇನನ್ನೋ ಯೋಚಿಸುತ್ತಾ- ಕಲ್ಪಿಸಿಕೊಳ್ಳುತ್ತಾ ಹೊರಡುವವನಿಗೆ ಆಫೀಸು ತಲುಪುವುದು ಗೊತ್ತಾಗುತ್ತಿರಲಿಲ್ಲವೋ ಏನೋ ಆದರೆ ಅಲ್ಲೇ ಹತ್ತಿರದ ಆಸ್ಪತ್ರೆಯಿಂದ ಹೊರಹೊಗುವ ಅಥವ ಆಸ್ಪತ್ರೆಯೊಳಗೆ ದೊಡ್ಡ ಸದ್ದು ಮಾಡುತ್ತಾ ಒಳಬರುವ ಆಂಬ್ಯುಲೆನ್ಸ್‌ಗಳನ್ನು ನೋಡುತ್ತಲೇ ಅನಂತಮೂರ್ತಿಗೆ ವಿಚಿತ್ರ ಸಂಕಟ ಆಗುತ್ತೆ. ಅದರ ಒಳಗೆ ಮಲಗಿರಬಹುದಾದ ಪೇಷಂಟಿನ ಕಲ್ಪನೆಗಳು ಬರುತ್ತೆ. ಸುಟ್ಟ ಗಾಯವಿರಬಹುದಾ? ಬೈಕಿನಿಂದ ಬಿದ್ದಿದ್ದೋ? ಟಿ.ಬಿ? ಹಾರ್ಟಟ್ಯಾಕ್? ಕ್ಯಾನ್ಸರ್? ಯಾರ ಹೆಂಡತಿ, ಯಾರ ಮಾವ ಯಾರ ತಮ್ಮ ಇನ್ನ್ಯಾರ ಅಕ್ಕ, ಅವರ ಕಣ್ಣ ಕೆಂಪು, ಬದಲಿಸದ ಸೀರೆ, ಬಿಕ್ಕಳಿಸುವ ದುಃಖ, ತೂತಾದ ಬನೀನು, ಹೆದರಿದ ಹಣೆಯಂಚಿನ ಬೆವರು, ರಕ್ತ, ಮುಗ್ಗಲು ಬದಲಿಸುತ್ತಿರುವ ಸಂಕಟ, ಗ್ಲೂಕೊಸು, ಇಂಜೆಕ್ಷನ್ನು, ಕುಳ್ಳ ಡಾಕ್ಟ್ರು, ಬಿಳೀ ಬಟ್ಟೆಯ ವಾರ್ಡ್ ಬಾಯ್, ಮಲಿಯಾಳಿ ನರ್ಸು ಎಲ್ಲಾ ಮನಸ್ಸಿನಲ್ಲಿ ಮೂಡುವುದರಿಂದ ಆಫೀಸಿಗೆ ಬಂದು ಬೇಜಾರಾಗಿ ಕೂರುತ್ತನೆ.


“ಅವನನ್ನ ನಂಗೆ ಪ್ರೀತ್ಸಕ್ಕಾಗಲ್ಲ. ಅವನು ನನ್ನ ಪೂರ್ತಿ ಅರ್ಥ ಮಾಡ್ಕೊಂಡಿದಾನೆ. ನನ್ನ ಪ್ರತಿಯೊಂದು ರೀತಿಯೂ ಅವನಿಗೆ ಅರ್ಥ ಆಗುತ್ತೆ. ಮಾತಾಡೋಕ್ಕೆ ಕಷ್ಟ ಪಡುತ್ತಾ ಏನೋ ಹೇಳುತ್ತಿದ್ದರೆ ‘ನೀನು ಏನೋ ಹೇಳ್ಬೇಕು ಆದ್ರೆ ಏನನ್ನೋ ಹೇಳ್ತಾ ಇದೀಯ’ ಅಂತಾನೆ. ನಾನು ಎನಾದ್ರೂ ಹೇಳೋಕ್ ಮುಂಚೆ ಅದು ಅವನಿಗೆ ಗೊತ್ತಾಗಿಬಿಡುತ್ತೆ. ನಾನು ಎಲ್ಲಿಗೋ ಬರ್ತಿನಿ ಅಂತ ಹೇಳಿ, ಹೋಗದಿದ್ದಾಗ ಅವನೂ ಬಂದಿರೋಲ್ಲ. ‘ನೀ ಬರಲ್ಲ ಅಂತ ಅನ್ನಿಸ್ತು ಅದಕ್ಕೇ ನಾನೂ ಬರೋಕ್ ಹೋಗ್ಲಿಲ್ಲ’ ಅಂತಾನೆ. ಬಟ್ಟೆ ಅಂಗಡಿಗೆ ಹೋಗಿರ್ತೀವಿ ನಂಗೆ ಇಷ್ಟ ಆಗಿರೋ ಜೀನ್ಸ್‌ನ ತೋರಿಸುತ್ತ ‘ಇದು ನಿಂಗೆ ಇಷ್ಟ ಆಯ್ತಲ್ವ?’ ಅಂತಾನೆ. ಅವತ್ತು ಎಲ್ಲರೂ ಹೋಟಲಿಗೆ ಹೋಗಿದ್ವಲ್ಲ ನೆನಪಿದ್ಯಾ? ನಾನು ವೆಜ್ ಬಿರ್ಯಾನಿ ತಿನ್ನಣ ಅಂತಿದ್ದೆ.. ಮೆನು ನೋಡುತ್ತಾ ನಿಮಗೆಲ್ಲಾ ಏನು ಬೇಕು ಅಂತ ಕೇಳುತ್ತಾ ಆರ್ಡರ್ ಮಾಡುತ್ತಿದ್ದವನು ನನ್ನ ಸರದಿ ಬಂದಾಗ ‘ನಿಂಗೆ ವೆಜ್ ಬಿರ್ಯಾನಿ ಅಲ್ವಾ’ ಅಂತ ಕಣ್ ಹೊಡ್ದಾ.. ಆಶ್ಚರ್ಯ ಆಯ್ತು ನಂಗೆ. ಬರೀ ಇಷ್ಟೇ ಅಲ್ಲ.. ಪುಸ್ತಕ ತೊಗೊಳೋವಾಗ, ಮೂವಿಗೆ ಹೋಗಣ ಅನ್ಕೊಂಡಾಗ ಗಿಫ್ಟ್ ಹುಡುಕೋವಾಗ, ಎಲ್ಲಿಗಾದ್ರೂ ಹೋಗಣ ಅನ್ಕೊಂಡಾಗ ಏನಾದ್ರೂ ಅವನಿಗೆ ಗೊತ್ತಾಗುತ್ತೆ.

ಅಷ್ಟೆಲ್ಲಾ ಅರ್ಥ ಮಾಡ್ಕೊಂಡಿದಾನಲ್ಲ ಅದಕ್ಕೇ ಹಿಂಸೆ ಆಗತ್ತೆ ನಂಗೆ. ನಾನು ಏನು ಯೋಚಿಸಿರೂ ಗೊತ್ತಾಗುತ್ತಲ್ಲ ಅಂತ ಭಯವಾಗುತ್ತೆ. ನಾನು ಬಿಚ್ಚಿಟ್ಟ ಪುಸ್ತಕ ಅವನಿಗೆ. ಓದಿ ಮುಗಿಸಿದಾನೆ. ಬಹಳ ಇಷ್ಟವಾದ ಪುಸ್ತಕವನ್ನ ಮತ್ತೆ ಮತ್ತೆ ಓದುವ ಪ್ರೀತಿ ಇರಬಹುದು, ಆದರೆ ಮೊದಲನೆ ಸತಿ ಓದೋವಾಗ ಇರೋ ಕಾತರತೆ ಇರಲ್ಲ. ಅದು ದೇವರ ಪ್ರೀತಿ, ನಿಶ್ಚಲ ಸರೋವರದಂತೆ ಭೋರ್ಗರೆಯುವುದಿಲ್ಲ, ಉಕ್ಕುವುದಿಲ್ಲ. ನನಗೆ ಅಂಥ ಪ್ರೀತಿ ಬೇಕಾಗಿಲ್ಲ.... ಎಲ್ಲರಿಗೂ ಅರ್ಥ ಆಗೋದಿಲ್ಲ ಇದು. ಹೇಳಿದ್ರೆ ಹುಚ್ಚು ಅನ್ಕೊತಾರೆ. ಅಣ್ಣಾ ನೀನು ಇಷ್ಟು ಬಲವಂತ ಮಾಡಿದ್ಯಲ್ಲ ಅಂತ ಹೇಳ್ದೆ.” ಅಂತ ತುಂಬ ನಿಧಾನವಾಗಿ ಪಿಸುಗುಟ್ಟುವಂತೆ ಹೇಳಿದಳು ವಸುಂಧರ.

ಅವಳು ಪಿಸುಗುಟ್ಟುತ್ತಿದ್ದುದು ಕರೆಂಟು ಹೋಗಿ ಕತ್ತಲಾಗಿರುವುದಕ್ಕೋ ಇಲ್ಲವೇ ಮಹಡಿಮೇಲಿರುವ ಸೋದರತ್ತೆಗೆ ಕೇಳಿಸುತ್ತದೆ ಎಂಬ ಕಾರಣದಿಂದಲೋ ಎಂದು ಅರ್ಥವಾಗಲಿಲ್ಲ. ಮೇಲಿರುವ ಅತ್ತೆಗೆ ಕೇಳಿಸುವ ಪ್ರಮೇಯವಿರಲಿಲ್ಲ ಅವರು ಅಮ್ಮನ ಜೊತೆ ದೊಡ್ಡ ದನಿಯಲ್ಲಿ ಮಾತಾಡುತ್ತಿದ್ದರು. ಅತ್ತೆಗೆ ತಮ್ಮ ಮಗ ಜನ್ನ ಮತ್ತು ವಸುವಿನ ಮದುವೆಯಾಗಲಿ ಎಂಬ ಆಸೆ ಇತ್ತು. ಅವನಂತೂ ಇವಳನ್ನು ತುಂಬಾ ಪ್ರೀತಿಸುತ್ತಿದ್ದ, ತುಂಬಾ ಹಚ್ಚಿಕೊಂಡಿದ್ದ. ಇವಳೂ ‘ಅವನು ತುಂಬಾನೇ ಒಳ್ಳೆ ಹುಡ್ಗ ಆದ್ರೆ ಅವನನ್ನ ಮದುವೆ ಮಾತ್ರ ಆಗಲ್ಲ.’ ಅನ್ನುತ್ತಿದ್ದಳು. ಅವನು ಯಾಕೆ ಬೇಡ ಕಾರಣ ಹೇಳು ಅಂದಿದ್ದಕ್ಕೆ ಉತ್ತರ ಮಾತ್ರ ಕೊಟ್ಟಿರಲಿಲ್ಲ. ಸಂಜೆ ಆಫೀಸಿನಿಂದ ಬಂದಮೇಲೆ ಏನೇನೋ ಮಾತಡುತ್ತಾ ಕೂತಿರುವಾಗ ಫಕ್ಕನೆ ಕರೆಂಟು ಹೊಯಿತು. ಸ್ವಲ್ಪ ಹೊತ್ತು ಸುಮ್ಮನಿದ್ದು ಅಮೇಲೆ ಹೇಳಿದಳಲ್ಲಾ.....

ಹೌದಾ, ಕತ್ತಲು ಮೌನವನ್ನು ಕಲಿಸುತ್ತದಾ? ಕತ್ತಲಲ್ಲಿ ಬೊಬ್ಬೆ ಹಾಕಲಾಗುವುದಿಲ್ಲ. ನಾವ್ಯಾಕೆ ಕತ್ತಲಿಗೆ ಹೆದರಿ ಸುಮ್ಮನಾಗುತ್ತೇವೆ? ಇಲ್ಲವೇ ಕಳೆದುಹೋಗುತ್ತೇವೆ, ನಮ್ಮ ಒಳಗುಗಳನ್ನು ತಡಕಾಡುತ್ತೇವೆ? ಕತ್ತಲಾಗುತ್ತಾ ಹಕ್ಕಿಗಳೂ ಸುಮ್ಮನಾಗುತ್ತವಲ್ಲ..? ಕತ್ತಲಲ್ಲಿ ಮೌನವಾಗಿ ಆಪ್ತವಾಗುತ್ತೇವೆ, ಹತ್ತಿರ್‍ವಾಗುತ್ತೇವೆ ನಿಜವಾಗುತ್ತೆವೆ. ಕತ್ತಲಿಗೆ ನಮ್ಮ ಅಸ್ಥಿತ್ವವನ್ನ ಹಿರಿದಾಗಿಸುವ ಶಕ್ತಿ ಇದೆ. ಕತ್ತಲು ಗುಟ್ಟುಗಳನ್ನು ಅಡಗಿಸಿಕೊಳ್ಳುತ್ತೇನೆ ಎಂಬ ಭ್ರಮೆಯನ್ನ ಹುಟ್ಟಿಸುತ್ತದೆ ಅದಕ್ಕೆ ಧೈರ್ಯ ಮಾಡುತ್ತೇವೆ. ಕತ್ತಲಿಗೆ ವಿಚಿತ್ರವಾದ ಶಕ್ತಿ ಇದೆ. ಅದು ಸುಮ್ಮನೆ ಇರುತ್ತದೆ, ತಣ್ಣಗೆ ಕರೆಯುತ್ತದೆ. ಬೆಳಕಿನಲ್ಲಿ ಬತ್ತಲಾಗಿಸುತ್ತದೆ ಅಸಹಾಯಕವಾಗಿ ಕೈಚಲ್ಲುತ್ತದೆ ಅಂದುಕೊಂಡ.

ಅನಂತಮೂರ್ತಿಗೆ ಕಾಲೇಜು ದಿನಗಳ ನೆನಪು ಬರ್ತಿತ್ತು. ಜೋಗ್‌ಗೆ ಹೋದಾಗ ಅಲ್ಲಿ ಇನ್ನೊಂದು ಕಾಲೇಜಿನವರು ಇಪ್ಪತ್ತು ಜನ ಬಂದಿದ್ದರು. ಅವರಲ್ಲಿ ಎಂಟು ಜನ ಹುಡುಗರು, ಇಬ್ಬರು ಹುಡುಗೀರು ಪೂರ್‍ತಿ ಕೆಳಗಿಳಿದಿದ್ದರು. ಇಳಿಯೋದೇನೋ ಇಳಿದಿದ್ದಾರೆ ವಾಪಸ್ ಹೋಗೋಕ್ ಗೊತ್ತಾಗ್ತಿಲ್ಲ. ನೀರು-ಪಾಚಿ. ಒಬ್ಬಳು ಹುಡುಗಿಯಂತೂ ಸಂಜೆ ಕತ್ತಲಾಗುತ್ತಿದ್ದರೂ ಇನ್ನೂ ಸ್ವಲ್ಪ ಹೊತ್ತು ಇಲ್ಲೇ ಇರಣ ಅಂತ ಹಠ ಮಾಡುತ್ತಿದ್ದಳು. ಅವಳ ಉತ್ಸಾಹ ಹೇಗಿತ್ತೆಂದರೆ ಯಾವುದೋ ಹಕ್ಕಿಯ ಮುದ್ದು ಧ್ವನಿಯನ್ನ ನುಂಗಿದಾಳೇನೋ, ಆ ಧ್ವನಿಯ ಮಂದ್ರ ಆಲಾಪಗಳು ದೇಹದ ಮೂಲೆ ಮೂಲೆಗೂ, ಕಣ್ಣಿನ ಬೆಳಕಿಗೂ, ಮೂಗಿನ ಹಟಕ್ಕೂ, ನುಣುಪು ಕೆನ್ನೆಯ ಅಹಂಕಾರಕ್ಕೂ, ಅವಳು ಅಕಸ್ಮಾತಾಗಿ ಕಚ್ಚಿದರೂ ಸಾಕು ರಕ್ತ ಹೊರಬರುತ್ತೆ ಅನ್ನುವಂತಿದ್ದ ಕೆಂಪು ತುಟಿಯೊಳಗಿನ ಜೀವಕ್ಕೂ, ಒದ್ದೆಕೂದಲಿನಲ್ಲಿ ಸಿಕ್ಕಿ ಹಾಕಿಕೊಂಡ ನೀರ ಹನಿಗಳಿಗೂ, ಕೈ ಬೀರಳಿನ ಕೆಂಪಿಗೂ, ಕಾಲಿನ ಕಿರುಬೆರಳಿನ ಉಗುರಿಗೆ ಹಚ್ಚಿಕೊಂಡ ತೆಳು ನೇರಳೆ ಬಣ್ಣಕ್ಕೂ ಹರಡಿದೆ ಎನ್ನುವಂತೆ ಪುಟಿಯುತ್ತಿದ್ದಳು. ಅನಂತಮೂರ್ತಿ ಜನ್ನ ಸೇರಿಕೊಂಡು ಎಲ್ಲರಿಗೂ ಮೇಲೆ ಹೋಗಲು ಸಹಾಯ ಮಾಡುತ್ತಿದ್ದರು. ಎಲ್ಲರಿಗಿಂತಲೂ ಮುಂದೆ ಹೋಗುತ್ತಾ ಎಲ್ಲಿ ಜಾರುತ್ತೋ ಅಲ್ಲಿ ನಿಂತುಕೊಂಡು ಹಿಂದೆ ಬರುತ್ತಿರುವವರನ್ನು ದಾಟಿಸುತ್ತಿದ್ದರು. ಅವಳು ಬಂದಳು ದಾಟಿಸೋದಕ್ಕೆ ಅಂತ ಕೈ ಹಿದಿದುಕೊಂಡಾಗ ನೋಡಿದ.... ಪಾರದರ್ಶಕ ಕಣ್ಗಳು. ಆ ಕಣ್ಗಳಲ್ಲಿ ಎಂಥಾ ನಿರ್ಲಕ್ಷವಿತ್ತು ಅಂದರೆ ’ಅಬ್ಬ!’ ಅನ್ನಿಸಿತ್ತು.

ಜೋಗದಿಂದ ವಾಪಸ್ಸು ಬಂದಮೇಲೂ ಅವಳ ಕಣ್ಗಳು ಅವನನ್ನು ಎಡಬಿಡದೆ ಕಾಡಿದ್ದವು. ಆ ಹುಡುಗಿ ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜಿನವಳು ಅಂತ ಮಾತ್ರ ಗೊತ್ತಿತ್ತು. ಅವಳ ಬಗ್ಗೆ ಇಂಟರ್ನೆಟ್ಟಿನ ಆರ್ಕುಟ್ಟಿನಲ್ಲಿ ಹುಡುಕಲು ಪ್ರಯತ್ನ ಮಾಡಿದ, ಸಹ್ಯಾದ್ರಿ ಕಾಲೇಜಿನ ತನ್ನ ಸ್ನೇಹಿತರನ್ನು ವಿಚಾರಿಸಿದ ಆದರೆ ಉಪಯೋಗವಾಗಿರಲಿಲ್ಲ. ಅವಳ ಕಣ್ಗಳು ಅದರ ನಿರ್ಲಕ್ಷ ಇಂದಿಗೂ ಯಾಕೆ ಕಾಡುತ್ತೆ ಅಂದುಕೊಂಡ.

ಅಂಥ ನಿರ್ಲಕ್ಷ ವಸುವಿನ ಸ್ವಭಾವದಲ್ಲೇ ಇದೆ ಬರೀ ಕಣ್ಗಳಲಲ್ಲ, ಅವಳನ್ನ ಆಶ್ಚರ್ಯ ಪಡಿಸೋಕ್ಕೆ ಸಾಧ್ಯಾನೇ ಇಲ್ಲವೇನೋ ಅನ್ನೋಥರ ಇರುತ್ತಾಳಲ್ಲಾ.. ಅವಳಿಗೆ ಅಮ್ಮನ ಸಂಕಟ ಅರ್ಥ ಆಗೋದೇ ಇಲವ? ಮದುವಯೇ ಆಗೋಲ್ಲವಾ ಇವಳು? ಎಂಬ ಪ್ರಶ್ನೆಗಳು ಅವನ ತಲೆಯನ್ನ ಸುತ್ತುತ್ತಿದ್ದವು.

“ವಸು ನಿಂಗೆ ಬೇರೆ ಯಾರಾದ್ರೂ ಇಷ್ಟ ಆಗಿದಾರೇನೆ..?” ತಂಗಿಯನ್ನ ಪ್ರೀತಿಯಿಂದ ನೋಡಿದ “ಅಣ್ಣಾ ನಿಂಗೆ ರಾಘು ಜ್ಞಾಪಕ ಇದಾನಾ?” ಅಣ್ಣ ತನ್ನ ನೆನಪಿನ ಪುಟಗಳನ್ನ ತಿರುವುತ್ತಾ ಗೊಂದಲಗೊಂಡಿರುವುದನ್ನ ಗುರುತಿಸಿ “ನಾವು ಹಾಸನದಲ್ಲಿದ್ದಾಗ ನಮ್ಮ ಮನೆ ಹತ್ರ ಇದ್ನಲ್ಲ ನೀನು ಆಗ ಬೆಂಗಳೂರಿನಲ್ಲೇ ಓದ್ತಿದ್ದೆ ನಿಂಗೆ ಸರಿಯಾಗಿ ಪರಿಚಯ ಇಲ್ವೇನೋ ಅಮ್ಮಂಗೆ ಚೆನ್ನಾಗ್ ಗೊತ್ತು. ಅಪ್ಪಂಗೆ ಇಲ್ಲಿಗೆ ಟ್ರಾನ್ಸ್ಫರ್ ಆಗಿ ನಾವು ಇಲ್ಲಿಗೆ ಬಂದ್ಮೇಲೆ ಕಾಂಟ್ಯಾಕ್ಟ್ನಲ್ಲಿರಲಿಲ್ಲ. ಒಂದು ವಾರದ ಹಿಂದೆ ಕಾಫಿಡೇನಲ್ಲಿ ಅಕಸ್ಮಾತಾಗಿ ಸಿಕ್ಕಿದ.” ಅಂದಳು ನೆಲ ನೋಡುತ್ತಾ. ಅನಂತನಿಗೆ ತನ್ನ ತಂಗಿಯ ಕೆನ್ನೆ ಕೆಂಪಾದುದ್ದನ್ನ ಗಮನಿಸಲು ಕಷ್ಟಾವಾಗಲಿಲ್ಲ. ಆಶ್ಚರ್ಯ ಆಯ್ತು ಅವನಿಗೆ ತನ್ನ ತಂಗಿಗೆ ಯಾರೋ ಇಷ್ಟ ಆಗಿದಾರೆ ಅನ್ನೋದಕ್ಕಲ್ಲ ಅವಳೂ ನಾಚಿಕೆ ಪಟ್ಟುಕೊಳ್ಳುತ್ತಾಳಲ್ಲ ಅನ್ನೋದಕ್ಕೆ.

ಅನಂತನ ಕಲ್ಪನೆ ಗರಿ ಬಿಚ್ಚಿಕೊಳ್ಳುತ್ತಿತ್ತು.... ತನಗೆ ಸರಿಯಾಗಿ ಜ್ನಾಪಕವೇ ಇರದ ರಾಘು ಹೇಗಿರಬಹುದು? ಅವನು ಬುಲೆಟ್ ಇಟ್ಟಿರ ಬೇಕು ಇವಳಿಗೆ ಬೈಕಿಟ್ಟಿರೊರಿಗಿಂತ ಬುಲೆಟ್ ಇರೋರು ಇಷ್ಟ ಆಗ್ತಾರೆ. ಅವನನ್ನ ಇವಳು ಅಕಸ್ಮಾತಾಗಿ ನೋಡಿದಾಗ ಇವಳ ಕಣ್ಣುಗಳ ನಿರ್ಲಕ್ಷಕ್ಕೂ ಆಶ್ಚರ್ಯ ಆಗಿರಬಹುದಾ.. ಅವನು ತುಂಬಾ ಉದ್ದಕೆ ಇರಬಹುದಾ.. ಇವರಿಬ್ಬರ ಮದುವೆಯನ್ನ ಊರಲ್ಲೇ ಮಾಡಬೇಕು.. ಮದುವೆಗೆ...


“ ನಾನು ಇವತ್ತು ಊಟ ಮಾಡ್ದೆ” ಅಂತ ನಕ್ಕ ಮಧ್ಯಾಹ್ನದ ಉರಿ ಸೂರ್ಯ, ಸಂಜೆಗೆ ಕಿತ್ತಲೆ ಬಣ್ಣವಾಗಿ ಆಕಾಶವೆಲ್ಲಾ ಹರಡುವಂತೆ ಅವನ ನಗು ತುಟಿಯಲ್ಲಿ ಹುಟ್ಟಿ ಮೈಮನಗಳನ್ನು ಸವರಿಕೊಂಡು ಹರಡಿತು. ಅವನ ತುಟಿ ಎಷ್ಟು ಕೆಂಪಲ್ಲವ ಅಂದುಕೊಂಡು “ನೀನು ದಿನಾ ಊಟ ಮಾಡ್ದೆ ಉಪವಾಸ ಇರ್ತಿದ್ಯಾ.” ಕೇಳಿದಳು. “ಹಂಗಲ್ಲ ಕೇಳು-” ಅಂತ ತಾನು ಕುತಿದ್ದ ಆ ಕುರ್ಚಿಯನ್ನ ಟೇಬಲ್ಲಿಗೆ ಹತ್ತಿರ ಎಳೆದುಕೊಂಡ.

ಹೌದು ಅವರು ಹದಿನೈದು ದಿನಗಳಿಂದ ಮಾತಾಡಿಕೊಂಡಿದಾರೇನೋ ಅನ್ನುವಂತೆ ಜಯನಗರದ ಫೋರ್ಥ್ ಬ್ಲಾಕ್ನಲ್ಲಿರೋ ಕಲ್ಮನೆ ಕಾಫಿ ಹೌಸ್ ನಲ್ಲಿ ಸರಿಯಾಗಿ ನಾಲ್ಕೂ ಹದಿನೈದಕ್ಕೆ ಭೇಟಿಯಾಗುತ್ತಿದ್ದರು. ಹದಿನೈದು ದಿನಗಳ ಮುಂಚೆ ಅವರು ನಾಲು ವರ್ಷದ ನಂತರ ಅಲ್ಲಿ ಭೇಟಿಯಾಗಿದ್ದರು, ತುಂಬ ಅನಿರೀಕ್ಷಿತವಾಗಿ. ಸ್ನೇಹಿತೆಯೊಬ್ಬಳು ಎನೋ ಹೇಳಬೇಕು ಅಲ್ಲಿಗೆ ಬಾ ಅಂತ ಕರೆದಿದ್ದರಿಂದ ಅವಳಿಗೆ ಕಾಯುತ್ತಾ ಕುಳಿತಿದ್ದಳು ವಸು. ಇವನು ಸುಮ್ಮನೆ ಒಳಗೆ ಬಂದ ಇವಳ ಕಣ್ಗಳಲ್ಲಿ ದೀಪದ ಕಾಂತಿ. ಏನೂ ಹೇಳಲು ತೋಚದೆ ಸುಮ್ಮನೆ ನೋಡುತ್ತಿದ್ದಳು.. ಅವನೂ ನೋಡಿದ- ಮುಖ ಸಿಂಡರಿಸಿದ ಅವಳು ಮರೆತು ಹೋಗಿದ್ದಳಾ.. ಇಲ್ಲ ನಕ್ಕ “ವಸೂ.....” ಎದುರು ಬಂದು ಕೂರುತ್ತಲೇ “ಈಗಲೂ ನೀನು ಚಳಿಗಾಲದಲ್ಲಿ ಸ್ವೆಟರನ್ನು ಹಾಕಿಕೊಳ್ಳೋದಿಲ್ಲವ” ಕೇಳಿದ ಅವಳ ದುಂಡುಮಲ್ಲಿಗೆ ಬಿಳುಪಿನ ಟೀ ಶರ್ಟಿನ ವಿ ಆಕಾರದ ಕುತ್ತಿಗೆ ನೋಡುತ್ತಾ.. ಟಿ-ಷರ್ಟಿನ ಮೇಲೆ ಏನು ಬರೆದಿದ್ದಾರೆಂದು ಓದಬೇಕೆಂಬ ಆಸೆಯನ್ನು ಹತ್ತಿಕ್ಕಿಕೊಂಡು ಅವಳ ಕಣ್ಗಳನ್ನೇ ನೋಡಿದ. “ನೀನು ದಪ್ಪ ಆಗ್ಲೇ ಇಲ್ಲ ಅಂದಳು” ಅಷ್ಟೊತ್ತಿಗೆ ವಸುವಿನ ಸ್ನೇಹಿತೆ ಬಂದಳು ಪರಿಚಯ ಮಾಡಿಕೊಟ್ಟದ್ದಾಯಿತು, ಕಾಫಿ ಕುಡಿದು- ಮಾತಾಡಿ, ಲೇಟಾದರೆ ಅಮ್ಮ ಬೈಯುತ್ತಾಳೆಂದು ಜ್ಞಾಪಕಕ್ಕೆ ಬಂದು ಮನೆ ಕಡೆ ಹೊರಟಳು. ಅಮ್ಮನನ್ನು ಕೇಳ್ದೆ ಅಂತ ಕೂಗಿ ಹೇಳಿದ ರಾಘು.. ತಿರುಗಿ ನೋಡಿ ನಕ್ಕಳು.

ನಾಳೆ ಸಿಗು ಅಂತ ಅವನೇನೂ ಹೇಳಿರಲಿಲ್ಲ. ಇವಳೂ ಮಾತು ಕೊಟ್ಟಿರಲಿಲ್ಲ ಆದರೂ ಮಾರನೇ ದಿನ ಬಂದು ಕಾಯತೊಡಗಿದ್ದಳು, ಎದೆ ಹೊಡೆದುಕೊಳ್ಳುತ್ತಿತ್ತು.. “ಅವನು ಬರೂದಿಲ್ಲವ?” ಅವನು ಬಂದ ಬರುತ್ತಲೇ ಇವಳನ್ನು ನೋಡಿ ಸಮಾಧಾನದ ನಿಟ್ಟುಸಿರಿಟ್ಟ. ಅವನ ಕಣ್ಗಳಲ್ಲಿದ್ದ ಆತಂಕ ವಸುವನ್ನು ನೋಡುತ್ತಲೇ ಕರಗತೊಡಗಿದ್ದು ಕಾಣಿಸಿತು. ಇಬ್ಬರೂ ಮುದ್ದಾಗಿ ನಕ್ಕರು.

“-ಊಟ ಮಾಡೋದಕ್ಕೂ ಅನ್ನ ತಿನ್ನೋದಕ್ಕೂ ವ್ಯತ್ಯಾಸ ಇದೆ. ಅನ್ನ ತಿನ್ನೋದು ಅಂದ್ರೆ ಬದುಕೋಕ್ಕೆ ಏನಾದ್ರೂ ತಿನ್ನ ಬೇಕಲ್ಲ ಅದಕ್ಕೆ ಏನನ್ನದರೂ ತಿಂದು ಸುಮ್ಮನಾಗೋದು ಊಟ ಮಾಡೋದು ಅಂದ್ರೆ ಇವತ್ತು ಮಾಡಿದೆನಲ್ಲ ನನ್ನ ದೊಡ್ಡಮ್ಮನ ಮನೇಲಿ ಅದು. ಅದರಲ್ಲಿ ತಿಂದ ಸಂತೋಷ ಇರತ್ತೆ.....”

ಕಲ್ಮನೆ ಕಾಫಿ ಹೌಸಿನ ಪುಸ್ತಕಗಳು, ಅಲ್ಲಿನ ಚೌಕಾಕಾರದ ಮರದ ಕುರ್ಚಿಗಳು, ಅದಕ್ಕೆ ಒರಗಿಕೊಳ್ಳೋಕ್ಕೆ ಇಲ್ಲದಿರೋದ್ರಿಂದ ಮುಂದೆ ಬಾಗಿ ಕೂರುವ ಜನ, ಕಾಫಿ ಬೀಜದ ಬಣ್ಣದ ಕುಷನ್ನು, ಪಕ್ಕದ ಟೇಬಲ್ಲಿನ ಕುರ್ಚಿಯಲ್ಲಿ ಕೂತ ಕಾಲೇಜು ಹುಡುಗನ ಕೈಯಲ್ಲಿರುವ ಲೋಟ, ಅದರ ಬಿಸಿಯನ್ನ ಅನುಭವಿಸುತ್ತಿರುವ ಅವನ ತೆಳುಗಪ್ಪು ಬೆರಳುಗಳು, ದೂರದಲ್ಲಿರುವ ಪುಸ್ತಕಗಳನ್ನ ಕಣ್ಣಲ್ಲೇ ಅಳೆಯುತ್ತಿರುವ ಅಜ್ಜ ಯಾವುದೇ ಬಣ್ಣದ ಹಂಗಿಗೆ ಬೀಳದೆ ಹರಡಿರುವ ಅವರ ಬಿಳೀಗೂದಲು, ಈವಯಸ್ಸಿನಲ್ಲೂ ಹಿರೊವಿನಂತೆ ಕಾಣುತ್ತಿದ್ದ ಅವರು.... ಇವನು ವಯಸ್ಸಾದಮೆಲು ಹೀಗೇ ಇರುತ್ತಾನ..... “ಮದುವೆ ಆಗು ಈ ಕಷ್ಟನೇ ಇರಲ್ಲ ದಿನಾ ಊಟ ಮಾಡಬಹುದು” ಆಂದಳು. “ಆಗೋಣ” ಅಂದ. ನಕ್ಕಳು. ಅಣ್ಣನ ನೆನಪು ಬಂತು..... ಅಮ್ಮನಿಗೆ ಖುಷಿಯಾಗುತ್ತದಾ ಕೇಳಿಕೊಂಡಳು.


ಟ್ರಾಫಿಕ್ ಸಿಗ್ನಲ್ ನೋಡಿ ಫಕ್ಕನೆ ಕಾರು ನಿಲ್ಲಿಸಿದ ಅನಂತಮೂರ್ತಿ. ಆಂಬ್ಯುಲೆನ್ಸ್ ಒಂದು ದೊಡ್ಡದಾಗಿ ಶಬ್ಧ ಮಾಡುತ್ತಾ ಪಕ್ಕದ ರೋಡಿನಲ್ಲಿ ಹಾದು ಹೋಯಿತು. “ನಂ ಕಡಿ ಆಂಬ್ಯುಲೆನ್ಸ್‌ಗೆ ‘ಹೋಗು ಬಾ ಹೋಗು ಬಾ’ ಅಂತಾರೆ ಅಂತ ಆಫೀಸಿನಲ್ಲಿ ವೀರು ಹೇಳಿದ್ದು ಜ್ಞಾಪಕ ಬಂದು ನಗು ಬಂತು. ಅದ್ಯಾವುದೂ ನೆನಪಾಗಲಿಲ್ಲ ಆಗ ರಕ್ತ, ಗ್ಲೂಕೋಸು, ತೂತು ಬನೀನು, ಹಣೆಯಂಚಿನ ಬೆವರು, ಬದಲಿಸದ ಸೀರೆ.. ಅವರ್ಯಾರ ಬಗ್ಗೆಯೂ ಎನೂ ಅನ್ನಿಸಲಿಲ್ಲ ಯರದೋ ಅಣ್ಣ, ಇನ್ನ್ಯಾರದೋ ತಾಯಿ, ಮತ್ತ್ಯಾರ ಮಾವ.. ಆ ಸದ್ದಿಗೆ ಸಾಹಿತ್ಯವೋ ಅನ್ನುವಂತೆ ಹೋಗು ಬಾ ಹೋಗು ಬಾ ಎಂದು ಗುನುಗಿಕೊಳ್ಳುತ್ತಾ ಆಫೀಸಿನಿಂದ ಮನೆಗೆ ಹೋದರೆ ಮನೆಯಲ್ಲಿ ಯಾರೂ ಇಲ್ಲ. ಈ ಹೊತ್ತಿನಲ್ಲಿ ಎಲ್ಲರೂ ಎಲ್ಲಿ ಹೋದರು ಎಂದುಕೊಂಡು ಕಾಲ್ ಮಾಡಲು ಮೊಬೈಲ್ ತೆಗೆದು ನೋಡಿದರೆ ಹದಿನಾರು ಮಿಸ್ಡ್ ಕಾಲ್ ಇದ್ದವು. “ಛೆ ಸೈಲೆಂಟ್ ಮೋಡ್ನಲ್ಲೇ ಇದೆ.” ಕಾಲು ಯಾರು ಮಾಡಿದ್ದು ಅಂತ ನೋಡೋ ಹೊತ್ತಿಗೆ ಮತ್ತೆ ಕಾಲ್ ಬಂತು. ಎತ್ತಿದರೆ ಅಮ್ಮ “ವಸು!-ವಸು! ಆಕ್ಸಿಡೆಂಟ್.....” ಅಂತ ಬಿಕ್ಕುತ್ತಿದ್ದಳು. ಏನೂ ಅರ್ಥವಾಗಲಿಲ್ಲ ಜನ್ನ ಫೋನ್ ತೆಗೆದುಕೊಂಡು ಹೇಳಿದ “ಹಾಸನದಲ್ಲಿ ನಿಮ್ಮ ಮನೆ ಹತ್ರ ಇದ್ದನಂತಲ್ಲ ರಾಘು ಅಂತ ವಸು ಅವನ ಜೊತೆ ಬುಲೆಟ್ಟಿನಲ್ಲಿ ಬರುತ್ತಿದ್ದಳಂತೆ ಆಕ್ಸಿಡೆಂಟ್ ಆಗಿದೆ ಹುಡುಗ ಸ್ಪಾಟ್ನಲ್ಲೇ ಹೋಗ್ಬಿಟ್ಟಿದಾನೆ, ವಸುನ ನಿಮ್ಮ ಆಫೀಸಿನ ಹತ್ತಿರದಲ್ಲೇ ಇರೋ ಆಸ್ಪತ್ರೆಗೆ ಆಂಬ್ಯುಲೆನ್ಸ್ ನಲ್ಲಿ ಕರ್ಕೊಂಡು ಬಂದು ಸೇರ್ಸಿದಿವಿ” ಅಂತ ವರದಿ ಮಾಡುವವನ ಥರ ತಣ್ಣಗೆ ಹೇಳುತ್ತಿದ್ದಾನೆ ಅನ್ನೋದನ್ನ ಎಷ್ಟು ನಿರ್ಲಕ್ಷಿಸಬೇಕು ಅಂದುಕೊಂಡರೂ ಅನಂತಮೂರ್ತಿಗೆ ಅವನ ಧ್ವನಿಯಲ್ಲಿದ್ದ ತಣ್ಣಗಿನ ನಿರ್ಲಕ್ಷವನ್ನ- ಮಾತ್ಸರ್ಯವನ್ನ ಗಮನಿಸಿದೆ ಇರಲಾಗಲಿಲ್ಲ. ದುಃಖ ಉಮ್ಮಳಿಸಿ ಬರುತ್ತಿತ್ತು.


ತನಗೆ ಮುಖವೇ ಜ್ಞಾಪಕವಿರದ ರಾಘು ಮತ್ತು ತನ್ನ ತಂಗಿಯ ಜೀವನದ ಬಗ್ಗೆ ಕಲ್ಪಿಸಿಕೊಂಡಿದ್ದೆಲ್ಲಾ ಕಲ್ಪನೆಯಾಗೇ ಉಳಿದಿತ್ತು. ಹೌದು ತಾನು ಕವಿಯೋ ಲೇಖಕನೋ ಚಿತ್ರಕಾರನೋ ಆಗಬೇಕು ಅಂದುಕೊಂಡು ಬರೆಯಲು ಶುರು ಮಾಡಿದ ಅನಂತಮೂರ್ತಿ.... ಅವನು ಇಂದು ದೊಡ್ಡ ಲೇಖಕನಾಗಿದ್ದಾನೆ.

(ಕನ್ನಡ ಪ್ರಭ ದಲ್ಲಿ ಪ್ರಕಟವಾದ ಕಥೆ )

Tuesday, March 18, 2008

ಮಳೆ ನೀರಿನಲ್ಲಿ...

ಸಿಹಿ ಘಮವೇ...
ವಾತಾವರಣವನ್ನೆಲ್ಲಾ ಘಂ ಎನಿಸುತ್ತಾ ಹಿತವಾಗಿ ನೆಲವನ್ನು ಒದ್ದೆಯಾಗಿಸುತ್ತಿದ್ದ ಮಳೆ ಅಮಲೇರಿ ಧೋ ಧೋ ಎಂದು ಸುರಿಯುತ್ತಿದೆ. ಕಿಟಕಿಯಿಂದ ನೋಡುತ್ತಿದ್ದರೆ ಆಸೆ ಹತ್ತಿಕ್ಕಲಾಗಲಿಲ್ಲ. ಯಾರಾದರೂ ಏನಾದರೂ ಅಂದುಕೊಂಡು ಸಾಯಲಿ ಅಂತ ಕನಕಾಂಬರದ ಗಿಡಗಳನ್ನ, ಮಲ್ಲಿಗೆ ಬಳ್ಳಿಯನ್ನ ಹಬ್ಬಿಸಿರುವ ಹಿತ್ತಲಿಗೆ ಹೋಗಿ ನನೆಯುತ್ತಿದ್ದರೆ ನೀನು ಈಜುತ್ತಿದ್ದ ನೆನಪು.ನದಿಯಲ್ಲಿ, ನನ್ನಲ್ಲಿ. ಪ್ರೀತಿ ಮಳೆಯಲ್ಲಿ ಒದ್ದೆ ಒದ್ದೆ.
ಇಬ್ಬನಿಯಲಿ ನೆಂದಿದೆ
ಪ್ರೀತಿಯಲಿ ತೊಯ್ದಿದೆ
ನೆನಪಿನಲಿ ನೇಯ್ದಿದೆ
ಈ ಪ್ರೇಮ..

ಅಜ್ಜಿಗೆ ಇನ್ನಿಲ್ಲದ ಹೊಟ್ಟೆಗಿಚ್ಚು. ನಾನು ಮಳೇಲಿ ನೆನಿತಾ ನಿನ್ನ ನೆನಪಿಸಿಕೊಳ್ಳುತ್ತಿರುವ ವಾಸನೆ ಹತ್ತಿದವಳಂತೆ ಕೊಡೆ ಹಿಡಿದುಕೊಂಡು ಹಿತ್ತಲಿಗೆ ಬಂದು ನೀ ಹಿಂಗೆಲ್ಲಾ ಮಳೇಲಿ ನೆಂದು ಹುಶಾರ್ ತಪ್ಪಿಸ್ಕೊಳದಾದ್ರೆ ಹಳ್ಳಿಗೆ ಬರ್ಲೇ ಬೇಡ ಅಂತ ಗುಟುರು ಹಾಕಿದಳು. ನೀನು ನನಗೆ ಸಮುದ್ರ ತೋರಿಸಿದೆಯಲ್ಲ, ಅಬ್ಬಾ! ಅದು ನಿನ್ನ ಥರವೇ... ಸಮುದ್ರದ ಅಲೆಗಳು ದಡವನ್ನು ಅಪ್ಪಳಿಸುತ್ತವೆ ಅಂತ ಯಾರೋ ಬರೆದಿದ್ದು ಸುಳ್ಳು. ಸಮುದ್ರದ ತುಟಿಗಳು ದಡವನ್ನು ಮುತ್ತಿಕ್ಕುತ್ತಿರುವುದನ್ನು ನೊಡಿ ನನ್ನ ಒಳಗುಗಳು ಸ್ಥಬ್ಧ. ಅವತ್ತೆಲ್ಲಾ ಅಲ್ಲೆ ಇದ್ದೆವಲ್ಲಾ ಪ್ರತೀ ಅಲೆ ಉಕ್ಕೋವಾಗಲೂ ನೀನು ಸುರಿಸುತ್ತಿದ್ದ ಮುತ್ತುಗಳ ರಾಶಿ. ಸಾಗರದಲ್ಲಿ ಮುತ್ತು ಸಿಗುತ್ತೆ ಅಂತಾರಲ್ಲ ಇದಕ್ಕೇನಾ?

ಇಂದು ಮರಳಿಗೆ ಹಬ್ಬ.. ಅಪ್ಪೋ ಅಲೆಗೂ ಹಬ್ಬ..

ನೀನು ಅಲ್ಲಿ ಬೆಳ-ಬೆಳಗ್ಗೆ ಜಿಮ್ಮಿನಲ್ಲಿ ಬೆವರು ಸುರಿಸುತ್ತಾ ಜೋರಾಗಿ ಏದುಸಿರಾಗುತ್ತಿದ್ದರೆ ನನಗೆ ಇಲ್ಲಿ ನಿನ್ನ ಉಸಿರು ತಾಕಿದ ಅನುಭವ. ತುಂಬ ದಿನ ಆಯಿತಲ್ವಾ ಮಾತಾಡಿ. ನೀನು ಸಿಟ್ಟಾಗಿ ಕಳಿಸಿದ ಮೆಸೇಜ್ ನೋಡಿದೆ... ಜಗಳಗಂಟ. ಇನ್ನೇನು ನಾಡಿದ್ದು ಬಂದುಬಿಡ್ತೀನಿ, ಬೈಕೊಬೇಡ. ನಿನ್ನ ಬಿಟ್ಟು ಖುಶಿಯಾಗೇನಿಲ್ಲ ನಾನು..

ತೌರ ಸುಖದೊಳೆನ್ನ ಮರೆತಿಹಳು ಎನ್ನದಿರಿ
ನಿಮ್ಮ ಪ್ರೇಮವ ನೀವೆ ಒರೆಯನಿಟ್ಟು
ನಿಮ್ಮ ನೆನಹೇ ನನ್ನ ಹಿಂಡುವುದು ಹಗಲಿನಲಿ
ಇರುಳಿನಲಿ ಕಾಣುವುದು ನಿಮ್ಮಾ ಕನಸು

-ನೀ ಅಪ್ಪುವ ದಡ

Thursday, March 13, 2008

ಓಲೆ

ಆ ಮುತ್ತಿನ ಕಿವಿಯೋಲೆ ನೋಡುತ್ತಾ ಬೆಚ್ಚಿಬಿದ್ದೆ. ಅದು ಅಚ್ಚು ಹಾಗೇ ಇತ್ತು. ನನಗೆ ಯಾವಾಗಲೂ ಕಾಣುತ್ತಿದ್ದ ಓಲೆಯೇ ಅದು. ವ್ಯತ್ಯಾಸವೇ ಇಲ್ಲ. ಮೊಟ್ಟೆಯಾಕಾರದ ಮಾಸಿದ ಬಿಳುಪಿನ ಮುತ್ತು, ಅದರ ಬೆನ್ನಿಗೆ ಅಂಟಿಕೊಂಡ ಚಿನ್ನ. ಒಂದು ಚೂರು ಆಚೀಚೆ ಇಲ್ಲ. ಹಾಗೇ ಥೇಟ್. ಆ ಎಲ್ಲ ರಾಶಿ ಆಭರಣಗಳ ಮಧ್ಯೆ ಅದು ಕಣ್ಣಿಗೆ ಬಿದ್ದಿದ್ದು ವಿಶೇಷವೇನಲ್ಲ.

ಈಗ ಅಭ್ಯಾಸವಾಗಿ ಹೋಗಿದೆ. ಇದು ಶುರುವಾದದ್ದು ನಾನು ಪಿಯುಸಿಯಲ್ಲಿದ್ದಾಗ. ರಾಜಾಜಿನಗರದಲ್ಲಿ ಅವರ ಟ್ಯೂಷನ್ ಐದೂವರೆಗೆ ಶುರುವಾಗುತ್ತಿತ್ತು. ನಾನು ನಮ್ಮ ಹೆಸರುಘಟ್ಟದ ಮನೆಯನ್ನ ನಾಲ್ಕೂ ಕಾಲಿಗೆ ಬಿಟ್ಟು ಬಿಡುತ್ತಿದ್ದೆ. ಮನೆಯಿಂದ ಬಸ್ ಸ್ಟಾಪ್ ಗೆ ಹದಿನೈದು ನಿಮಿಷದ ದಾರಿ. ಹಾಗೇ ನೆಡೆದುಕೊಂಡು ಹೋಗುತ್ತಿದ್ದರೆ ಅವನು ನನ್ನನ್ನು ನೋಡುತ್ತಲೇ ನಿಂತಿರುತ್ತಿದ್ದ. ಅವನು ಯಾರಂತ ಗೊತ್ತಿರಲಿಲ್ಲ. ಇವತ್ತಿಗೂ ಗೊತ್ತಿಲ್ಲ. ಅವನೇನು ನನ್ನ ಕರೆದಿರಲಿಲ್ಲ. ಸುಮ್ಮನೆ ನನ್ನನ್ನು ನೋಡುತ್ತಿದ್ದ. ಆದರೆ ಅವನಲ್ಲಿ ಎಂಥ ವಿಲಕ್ಷಣವಾದ ಆಕರ್ಷಣೆ ಇತ್ತೆಂದರೆ ಒಂದು ದಿನ ನಾನೇ ಹತ್ತಿರ ಹೋಗಿದ್ದೆ. ನಾನು ಅವನ ಮುಂದೆ ನಿಂತ ತಕ್ಷಣ ಅವನು ನಡೆದುಕೊಂಡು ಹೋದ. ನಾನು ಕುರಿಯಂತೆ ಹಿಂಬಾಲಿಸಿದೆ. ಆಮೇಲೆ ನಡೆದದ್ದು ಕನಸೆಂದೇ ನನ್ನ ಭ್ರಮೆ. ಹೂವಂತೆ ನನ್ನ ಅರಳಿಸಿದ್ದ. ಹಿತವಾಗಿ ಕಲಕಿದ್ದ ಅವನು. ನಾನು ಹೇಗೆ ಮನೆಗೆ ವಾಪಸ್ಸು ಬಂದೆ ಎಂಬುದು ನನಗೆ ಗೊತ್ತಿಲ್ಲ. ಯಾರಿಗೂ ಗೊತ್ತಾಗದಂತೆ (ನನಗಾದರೂ ಗೊತ್ತಾಗಿತ್ತಾ?) ನನ್ನ ಜೀವನದಲ್ಲಿ ಏನೋ ನಡೆದುಹೋಗಿತ್ತು. ಅವನ ಎಡಕಿವಿಯಲ್ಲಿದ್ದ ಮುತ್ತಿನ ಓಲೆ ಮಾತ್ರ ಜ್ಞಾಪಕವಿತ್ತು. ಆಮೇಲಿಂದ "ಅಪ್ಪಾ ನಂಗೆ ಭಯ ಆಗತ್ತೆ, ನನ್ನ ಬಸ್ ಸ್ಟಾಪ್ ವರೆಗೂ ಬಿಡು" ಅಂತ ಕರೆದುಕೊಂಡು ಹೋಗಲು ಶುರು ಮಾಡಿದೆ. ಅಪ್ಪ ಬಂದು ಬಸ್ಸಲ್ಲಿ ಕೂರಿಸಿ ವಾಪಾಸು ಹೋಗಿ ಮಲಗುತ್ತಿದ್ದರು. ಹಾಗೆ ಒಂದು ದಿನ ಹೋಗುತ್ತಿದ್ದಾಗ ನನ್ನ ಹಿಂದೆ ಯಾರೋ ಬರುತ್ತಿದ್ದಾರೆನ್ನಿಸಿತು. ಬಲಗಡೆಗಿದ್ದ ಅಪ್ಪನ ಜೊತೆ ಮಾತನಾಡುತ್ತಲೇ ಎಡಗಡೆಗೆ ತಲೆ ತಿರುಗಿಸಿ ನೋಡಿದರೆ ಕಂಡಿದ್ದು ಮುತ್ತಿನ ಓಲೆ. ನನ್ನ ಮುಖ ಬಿಳಿಚಿದ್ದು ಅಪ್ಪನಿಗೆ ಕತ್ತಲಲ್ಲಿ ಗೊತ್ತಾಗಲಿಲ್ಲ. ಅವತ್ತು ಶುರು ಆಗಿದ್ದು ನನಗೆ ಬಹಳಷ್ಟು ಸಲ ಕಾಣಿಸಿದೆ. ಮುಖ ತೊಳೆದುಕೊಂಡು ಕನ್ನಡಿ ನೋಡಿಕೊಳ್ಳುವಾಗ ಎಲ್ಲರ ಜೊತೆ ಕೂತು ಏನನ್ನೋ ಹರಟುತ್ತಿರುವಾಗ, ಆಟಾಡುವಾಗ, ಹಾಲು ಕಾಯಿಸುವಾಗ, ಕಾಲೇಜಿನಲ್ಲಿ ಪಾಠ ಮಾಡುವಾಗ, ಇಸ್ತ್ರಿ ಮಾಡುವಾಗ ಹೀಗೆ.... ಪ್ರತಿಯೊಂದು ಬಾರಿಯೂ ನನ್ನ ಹಿಂದೆ ಎಡಗಡೆಗೆ ಯಾರೋ ಇರುತ್ತಾರೆ. ಆ ಮುತ್ತಿನ ಓಲೆ ಹಾಕಿಕೊಂಡು. ಅವರು ಕಾಣಿಸುವುದಿಲ್ಲ, ಬರೀ ಓಲೆ ಕಾಣಿಸುತ್ತದೆ.


ಹೀಗೆ ಕಾಣಿಸಲು ಶುರುವಾಗಿ ಆರು ತಿಂಗಳಾದರೂ ಯಾರಿಗೂ ಹೇಳಿರಲಿಲ್ಲ ಇದರ ಬಗ್ಗೆ. ಏನೆಂದು ಹೇಳಲಿ? ಮುತ್ತಿನ ಓಲೆ ಕಾಣಿಸುತ್ತದೆ ಎಂದಾ? ಹುಚ್ಚು ಅನ್ನುವುದಿಲ್ಲವಾ? ಆದರೆ ಒಂದು ದಿನ ತಡೆಯಲಾಗದೆ ಅಕ್ಕನಿಗೆ ಹೇಳಿದೆ. ಅವಳು ಆಗ ತಾನೆ ಬಿ.ಎಸ್.ಸಿ ಸೈಕಾಲಜಿ ಓದುತ್ತಿದ್ದಳು. ತಕ್ಷಣ ಅವಳು ಇದನ್ನ ಹಾಲೂಸಿನೇಶನ್ ಎಂದಳು. "ಹಂಗಂದ್ರೆ ನಿಜವಾಗಲೂ ಅಲ್ಲಿ ಏನೂ ಇರೋದಿಲ್ಲ, ಆದರೆ ನಮಗೆ ಮತ್ತೆ ನಮ್ಮ ಸೆನ್ಸ್ ಆರ್ಗನ್ಸ್ ಗಳಿಗೆ ಏನಾದ್ರೂ ಇರುತ್ತೆ ಅನಿಸುತ್ತೆ. ಉದಾಹರಣೆಗೆ ಕೆಲವೊಬ್ಬರು ನಮಗೆ ದೇವರು ಕಾಣಿಸುತ್ತೆ ಅಂತನೋ, ಅಥವಾ ಯಾವದ್ಯಾವುದೋ ಸದ್ದುಗಳು ಕೇಳುತ್ತೆ ಅಂತನೋ ಹೇಳ್ತಾರಲ್ಲ ಹಂಗೆ, ಇದೊಂದು ಮಾನಸಿಕ ಸಮಸ್ಯೆ ಅಷ್ಟೇ" ಎಂದಿದ್ದಳು. ಸರಿ, ನನಗೆ ಎಲ್ಲಾ ರೀತಿಯ ಮನಶ್ಯಾಸ್ತ್ರದ ಪರೀಕ್ಷೆಗಳನ್ನ ಮಾಡಿಸಿದ್ದಾಯ್ತು, ಎಂಥೆಂತದೊ ಮಾತ್ರೆಗಳನ್ನ ತಿಂಗಳುಗಟ್ಟಲೇ ತಿನ್ನಿಸಿದ್ದಾಯ್ತು. ಆದರೆ ನನ ಓಲೆ ಕಾಣಿಸುವುದು ನಿಂತಿರಲಿಲ್ಲ. ಅದು ಕಾಣಿಸುತ್ತಿತ್ತು ಅನ್ನೋದು ಬಿಟ್ಟರೆ ಬೇರೇನು ತೊಂದರೆ ಆಗಿರಲಿಲ್ಲ ನನಗೆ. ಹಾಲೋಸಿನೇಶನ್ ಗೆ ಒಳಗಾಗಿರುವ ರೋಗಿಗಳ ಬೇರೆ ಯಾವ ಗುಣ ಲಕ್ಷಣಗಳೂ ನನ್ನಲ್ಲಿ ಇರಲಿಲ್ಲ. ಅಪ್ಪ ಅಮ್ಮ ಮಾಡಿಸಿದ ಟ್ರೀಟ್ ಮೆಂಟ್ ಗಳ ನಂತರವೂ ನನಗೆ ಓಲೆ ಕಾಣಿಸುತ್ತದೆ ಎಂದು ಹೇಳಿದರೆ ಅವರು ಸಂಕಟ ಪಟ್ಟುಕೊಳ್ಳುತ್ತಾರೆ ಅಂತ ಗೊತ್ತಿತ್ತು. ಅದಕ್ಕೆ ನನಗೆ ಈಗ ಅಂತದ್ದೇನು ಕಾಣುವುದಿಲ್ಲ ಎಂದು ಸುಳ್ಳು ಸುಳ್ಳೇ ಹೇಳೆ ಅಪ್ಪ ಅಮ್ಮನನ್ನು ಸಮಾಧಾನ ಪಡಿಸಿದ್ದೆ.

ನಾನೇ ಮನಶ್ಯಾಸ್ತ್ರವನ್ನು ಮುಖ್ಯ ವಿಷಯವನ್ನಾಗಿ ಆರಿಸಿಕೊಂಡು ಅದರಲ್ಲೇ ಪಿ.ಜಿ ಮಾಡಿ ಈಗ ಅದೇ ವಿಷಯವನ್ನು ಪಾಠ ಮಾಡುತ್ತಿದ್ದೇನೆ. ಏನೂ ವ್ಯತ್ಯಾಸವಾಗಿಲ್ಲ. ಇಂದಿಗೂ ಹಾಗೇ ಆಗಾಗ ಆ ಮುತ್ತಿನ ಓಲೆ ಕಾಣಿಸಿಕೊಳ್ಳುತ್ತದೆ.

ಅಂತ ಓಲೆಯನ್ನು ಸುಮಾರು ಇಪ್ಪತ್ತು ವರ್ಷದಿಂದ ಹುಡುಕುತ್ತಿದ್ದೇನೆ. ಆಭರಣದ ಅಂಗಡಿಗಳನ್ನೆಲ್ಲಾ ಜಾಲಾಡಿದ್ದೇನೆ. ಇಷ್ಟು ದಿನ ಆದರೂ ಸಿಕ್ಕಿರಲಿಲ್ಲ. ಈಗ ಇವತ್ತು ಕಂಡಿತು. ಆ ಮುತ್ತಿನ ಓಲೆಯನ್ನ ಕೊಂಡು ತಂದೆ. ನನ್ನ ಗಂಡನಿಗೋ ಮಕ್ಕಳಿಗೋ ಈ ವಿಷಯದ ಬಗ್ಗೆ ಒಂದು ಚೂರು ಸುಳಿವುಕೊಡಲಿಲ್ಲ. ಅವರಿಗೆ ನಾನು ಕೊಂಡು ತಂದ ಮುತ್ತಿನ ಓಲೆಯನ್ನೇ ತೋರಿಸಲಿಲ್ಲ. ಅದನ್ನ ಲಾಕರಿನಲ್ಲಿ ಭದ್ರವಾಗಿ ಮುಚ್ಚಿಟ್ಟೆ. ಅವತ್ತಿನಿಂದ ನನಗೆ ಆ ಓಲೆ ಕಾಣಿಸುವುದು ನಿಂತು ಹೋಗಿದೆ.


ಬರೀ ಇಷ್ಟೇ ಆಗಿದ್ದರೆ, ಇದನ್ನೆಲ್ಲಾ ಹೇಳಬೇಕಾಗಿರಲಿಲ್ಲ. ಮೊನ್ನೆ ನನ್ನ ಹದಿನಾರು ವರ್ಷದ ಮಗಳಿಗೆ ತಲೆಸ್ನಾನ ಮಾಡಿಸುತ್ತಾ ಅವಳ ಉದ್ದಕೂದಲನ್ನು ಸೀಗೇಪುಡಿಯಲ್ಲಿ ಉಜ್ಜುತ್ತಿದ್ದೆ. ಆಗ ಹೇಳಿದಳು "ಅಮ್ಮ, ಮೊನ್ನೆಯಿಂದ ನಂಗೆ ನನ್ನ ಹಿಂದೆ ಯಾರೋ ಇದ್ದಾರೆ ಅನ್ಸುತ್ತೆ. ಬರೀ ಅವರು ಹಾಕಿಕೊಂಡಿರೋ ಮುತ್ತಿನ ಓಲೆ ಕಾಣ್ಸುತ್ತೆ, ಹಿಂತಿರುಗಿ ನೋಡಿದ್ರೆ ಯಾರೂ ಇರಲ್ಲ" ಅಂದಳು. ನನ್ನ ಎದೆ ಧಸಕ್ ಎಂದಿತು. ರೂಮಿಗೆ ಹೋಗಿ ಲಾಕರ್ ಬೀಗ ತೆಗೆದು ನೋಡಿದೆ. ಆ ಮುತ್ತಿನ ಓಲೆ ಅಲ್ಲಿರಲಿಲ್ಲ.!!